ಬೀರೂರು: ಜೋಡಿತಿಮ್ಮಾಪುರ ಗ್ರಾಮದ ಶ್ರೀ ಬಸವೇಶ್ವರಸ್ವಾಮಿಗೆ ಗ್ರಾಮದ ಜನತೆ ಸೋಮವಾರ ಕುಂಭಾಭಿಷೇಕ ನೆರವೇರಿಸಿದರು.
ಮೂರು ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಈ ಬಾರಿ ಮಳೆಗಾಗಿ ಪ್ರಾರ್ಥಿಸಲು ಆಯೋಜಿಸಿದ್ದರು. ಭಾನುವಾರ ರಾತ್ರಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೋಮ, ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ನಡೆಯಿತು. ಸೋಮವಾರ ಬೆಳಗ್ಗೆ ಮಾರಮ್ಮನ ಮನೆಯ ಪಕ್ಕದಲ್ಲಿರುವ ಬಾವಿಯಿಂದ 221 ಮಹಿಳೆಯರು ಕುಂಭಗಳಲ್ಲಿ ನೀರನ್ನು ಹೊತ್ತು ತಂದು ಬಸವೇಶ್ವರ ಸ್ವಾಮಿ ದೇವಾಲಯದವರೆಗೆ ತಂದರು. ನಂತರ ಗಣಹೋಮ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನಡೆಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವ ನಡೆಸಲಾಯಿತು. ಹನುಮಾಪುರ, ಜೋಡಿತಿಮ್ಮಾಪುರ, ದೊಡ್ಡಘಟ್ಟ, ಗಾಳಿಹಳ್ಳಿ, ಕಾರೇಹಳ್ಳಿ ಸೇರಿಂದತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.