ಬೆಂಗಳೂರು: ಇಂದು ಸರ್ಜಾಪುರ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ಗಾಯಗಳಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಇದೀಗ ಹೊರಬಿದ್ದಿದೆ. ಬಸ್ ಚಲಾಯಿಸುವ ವೇಳೆ ಚಾಲಕ ತೂಕಡಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಾಗಿದೆ.
ವರ್ತೂರು ಡಿಪೋ 41ಕ್ಕೆ ಸೇರಿದ ಬಿಎಂಟಿಸಿ ಬಸ್ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಸರ್ಜಾಪುರ-ಅತ್ತಿಬೆಲೆ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಬಳಿಕ ಬಸ್ ಚಾಲಕನ ಮೇಲೆ ಹಲ್ಲೆ ಕೂಡ ನಡೆದಿದೆ.
ಸಾರಿಗೆ ನೌಕರರ ಹಿನ್ನೆಲೆಯಲ್ಲಿ ಚಾಲಕರಿಲ್ಲದ್ದರಿಂದ ಬಿಎಂಟಿಸಿ ಮೆಕ್ಯಾನಿಕ್ ಮೂಲಕ ಸಂಸ್ಥೆಯು ಬಸ್ ಆಪರೇಟ್ ಮಾಡಿದೆ. ಸಂಸ್ಥೆ ಸೂಚನೆ ಮೇರೆಗೆ ವರ್ತೂರು ಡಿಪೋ ಮೆಕ್ಯಾನಿಕ್ ಹರೀಶ್ ಹಾಗೂ ಮ್ಯಾನೇಜರ್ ಬಸ್ ರಸ್ತೆಗಿಳಿಸಿದ್ದಾರೆ. ಆದರೆ ಹೆಚ್ಚುವರಿ ಕೆಲಸವಾಗಿ ಬಸ್ ಚಾಲನೆಗಿಳಿದ ಮೆಕ್ಯಾನಿಕ್, ಮಾರ್ಗಮಧ್ಯೆ ತೂಕಡಿಸಿದ್ದರಿಂದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಮಧ್ಯೆ ಅಪಘಾತದ ಬಳಿಕ ಬಸ್ ಚಲಾಯಿಸಿದ್ದ ಮೆಕ್ಯಾನಿಕ್ಗೆ ಹೊಡೆದವರು ಬಿಎಂಟಿಸಿಯ ಮುಷ್ಕರನಿರತ ಸಿಬ್ಬಂದಿ ಎಂಬ ಶಂಕೆಯೂ ವ್ಯಕ್ತವಾಗಿದೆ. ಸರ್ಜಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾರಿಗೆ ನೌಕರರ ಯುಗಾದಿ ಸಂಭ್ರಮಕ್ಕೆ ಕತ್ತರಿ? ನಾಳೆಯಿಂದ ಕೆಲಸಕ್ಕೆ ಬಂದರೆ ಬೆಲ್ಲ… ಇಲ್ಲದಿದ್ದರೆ ಬೇವು!
ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್ ಹೊರಟಾಗ ಎದುರಾದ ಯಮರಾಯ!