ಬೆಂಗಳೂರು: ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮತ್ತೊಮ್ಮೆ ಗರಂ ಆಗಿದ್ದಾರೆ.
‘ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದರೂ ಇಂದು(ಬುಧವಾರ) ಕರೊನಾ ರೋಗಿಗೆ 5 ಲಕ್ಷ ರೂ. ಬಿಲ್ ಮಾಡಿದ್ದಾರೆ. ಈ ಸುದ್ದಿ ಕೇಳಿ ಆಘಾತವಾಯಿತು’ ಎಂದು ಸಚಿವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿರಿ 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!
‘ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿದೆ. ನಿಗದಿ ಮಾಡಿರುವ ದರಕ್ಕಿಂತಲೂ ರೋಗಿಗಳಿಂದ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂದು(ಬುಧವಾರ) ಆ ಖಾಸಗಿ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಡಾ. ಸುಧಾಕರ್ ಎಚ್ಚರಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು 1/2 pic.twitter.com/hoWD1JRfxU
— Dr Sudhakar K (@mla_sudhakar) July 29, 2020
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲೆಂದು ಸ್ಯಾಂಡಲ್ವುಡ್ ನಟಿ ಸುಧಾರಾಣಿ, ಮೊನ್ನೆ(ಸೋಮವಾರ) ರಾತ್ರಿ ಅಪೋಲೋ ಆಸ್ಪತ್ರೆಗೆ ಬಂದಿದ್ದರು. ಬೆಡ್ ಇಲ್ಲವೆಂಬ ಸಬೂಬು ಹೇಳಿ ಆಸ್ಪತ್ರೆ ಒಳಗೂ ಸೇರಿಸಿಕೊಳ್ಳದೆ ಸುಧಾರಾಣಿ ಅವರನ್ನು ರಾತ್ರಿಯಿಡೀ ಕಾಯುವಂತೆ ಮಾಡಿದ್ದರು.
ಈ ಬಗ್ಗೆ ಸುಧಾರಾಣಿ ಅವರೇ ನಿನ್ನೆ(ಮಂಗಳವಾರ) ಅಸಮಾಧಾನ ಹೊರಹಾಕಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಡಾ.ಕೆ. ಸುಧಾಕರ್, ‘ನಟಿ ಸುಧಾರಾಣಿ ಆರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದರು. ಇದಾದ ಮರುದಿನವೇ ಕರೊನಾ ರೋಗಿಯೊಬ್ಬರಿಗೆ ಅಪೋಲೋ ಆಸ್ಪತ್ರೆ 5 ಲಕ್ಷ ರೂ. ಬಿಲ್ ಮಾಡಿದೆ.
ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್