ಬೆಳಗಾವಿ: ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್ಡೌನ್ ೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಪೊಲೀಸ್ ಲಾಠಿ ಏಟು ತಪ್ಪಿಸಿಕೊಳ್ಳಲು ವ್ಯಕ್ತಿಯೋರ್ವ ‘ನಾಯಿ ಕಡಿದಿದೆ. ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೆ. ದಯವಿಟ್ಟು ಬಿಡಿ’ ಎಂಬ ನಾಮಫಲಕ ಹಿಡಿದು ಬೈಕ್ ಮೇಲೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವ ಮತ್ತು ಬೈಕ್ ಮೇಲೆ ಸಂಚರಿಸುತ್ತಿರುವವರ ಮೇಲೆ ಪೊಲೀಸರು ಲಾಠಿ ಏಟಿನ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗಾಗಿರುವ ಸಮಸ್ಯೆಯನ್ನು ನಾಮಲಕದ ಮೂಲಕ ಪ್ರದರ್ಶಿಸಿ ಮುಂದೆ ಸಾಗುವ ಯತ್ನ ಮಾಡಿದ್ದಾರೆ.
ಖಾನಾಪುರ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಶುಕ್ರವಾರದಂದು ನಾಯಿಯಿಂದ ಕಚ್ಚಿಸಿಕೊಂಡ ಗಾಯಾಳು ಮತ್ತು ಬೈಕ್ ಸವಾರ ನಗರದ ಬೋಗಾರವೇಸ್ ವೃತ್ತದ ಬಳಿ ಬರುತ್ತಿದ್ದಂತೆ ಪೊಲೀಸರು ಲಾಠಿ ಹಿಡಿದು ಅವರತ್ತ ಬಂದರು. ಈ ವೇಳೆ ಅವರು ಲಾಠಿ ಏಟು ಬೀಳುವ ಮೊದಲೇ ‘ನಾಯಿ ಕಚ್ಚಿದೆ, ಆಸ್ಪತ್ರೆಗೆ ಹೋಗುತ್ತಿದ್ದೇವೆ ದಯವಿಟ್ಟು ಬಿಡಿ’ ಎಂದು ನಾಮಫಲಕ ತೋರಿಸಿದರು. ಬಳಿಕ ಪೊಲೀಸರು ಅವರಿಗೆ ಜಿಲ್ಲಾಸ್ಪತ್ರೆಗೆ ತೆರಳಲು ಅನುವು ಮಾಡಿಕೊಟ್ಟರು.
ಬೈಕ್ ಸವಾರ ಮತ್ತು ಗಾಯಾಳು ವ್ಯಕ್ತಿಗೆ ಮರಾಠಿ ಹೊರತುಪಡಿಸಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಹೀಗಾಗಿ ನಗರದಲ್ಲಿ ಸಮಸ್ಯೆಯಾಗಬಹುದೆಂದು ಗ್ರಾಮದಿಂದಲೇ ಕನ್ನಡ ಭಾಷಿಗರಿಂದ ನಾಮಲಕ ಬರೆಯಿಸಿಕೊಂಡು ಬೆಳಗಾವಿಗೆ ಬಂದಿದ್ದರು. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.