ನವದೆಹಲಿ: ಅನಾರೋಗ್ಯದ ಸಂದರ್ಭ ಚಿಕಿತ್ಸೆ ನೀಡುವ, ಜೀವ ಉಳಿಸುವ ವೈದ್ಯರನ್ನು ದೇವರ ಸಮಾನ ಎಂಬಂತೆ ನೋಡುತ್ತಾರೆ. ಆದರೆ ಅದಕ್ಕೆ ಅಪವಾದ ಎಂಬಂತೆ ಅಂಥ ಸಂಕಷ್ಟದ ಸಮಯದಲ್ಲೂ ಹಣಕ್ಕೆ ಹಪಾಹಪಿಸುವ ದುರುಳರೂ ಇದ್ದಾರೆ. ಆ ರೀತಿಯ ಧನದಾಹಿ ವೈದ್ಯನೊಬ್ಬ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾನೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿದ್ದ ಬಡ ಮಹಿಳೆಯಿಂದಲೂ ಹಣ ಕೀಳಲು ಈ ವೈದ್ಯ ಮುಂದಾಗಿದ್ದ. ಸಿಜೇರಿಯನ್ ಮಾಡಿಸುವ ಅಗತ್ಯವಿದೆ, ಅದಕ್ಕಾಗಿ 8 ಸಾವಿರ ರೂ. ಕೊಡಬೇಕು ಎಂದು ಲಂಚಕ್ಕೆ ಕೈಯೊಡ್ಡಿದ್ದ.
ಬಳಿಕ ಈ ಮಾಹಿತಿ ಭ್ರಷ್ಟಾಚಾರ ವಿರೋಧಿ ದಳಕ್ಕೆ ತಲುಪಿದ್ದು, ಅದರ ಅಧಿಕಾರಿಗಳು ಆರೋಪಿ ವೈದ್ಯನ ಮನೆ ಮೇಲೆ ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ವೈದ್ಯನ ಮನೆಯಲ್ಲಿ 1.12 ಕೋಟಿ ರೂ. ನಗದು ಕಂಡುಬಂದಿದೆ. ಅದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಒಡಿಶಾದ ಪುರಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ.. ಅಲ್ಲಿನ ವೈದ್ಯ ಡಾ.ಎಸ್.ಕೆ.ಜೇನಾ ಎಂಬಾತನೇ ಆರೋಪಿ.