ಹಾಸನ: ಸಾರಿಗೆ ಇಲಾಖೆಯಲ್ಲಿ ಬಳಕೆಗೆ ಬಾರದ ನಿರುಪಯುಕ್ತ ಬಸ್ಗಳು ಸಂಚರಿಸುತ್ತಿರುವ ಬಗ್ಗೆ ಇದೀಗ ಸಕಲೇಶಪುರದ ಕೆಎಸ್ಆರ್ಟಿಸಿ ಡಿಪೋದಲ್ಲಿ ಸಾರಿಗೆ ಅಧಿಕಾರಿ ಮಾತನಾಡಿರುವ ವಿಡಿಯೋ ಬಹಿರಂಗವಾಗಿದೆ.
ಸಕಲೇಶಪುರ ಕೆಎಸ್ಆರ್ಟಿಸಿ ಡಿಪೋದಲ್ಲಿ ಬಸ್ ಡ್ರೈವರ್ ಮುಂದೆ ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಅಧಿಕಾರಿ ಜಗನ್ನಾಥ್ ಸತ್ಯ ಬಿಚ್ಚಿಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಬಸ್ ಒಂದರ ಚಾಲಕ ಹಾಗೂ ನಿರ್ವಾಹಕರು ಇಬ್ಬರೂ ಸೇರಿ, ಡಿಪೋ ವ್ಯವಸ್ಥಾಪಕರಲ್ಲಿ ಓಡಿಸಲು ಬೇರೆ ಬಸ್ ನೀಡಿ ಎಂದು ಮನವಿ ಮಾಡಿದ್ದು ಈ ಸಂದರ್ಭ ನಡೆದ ಮಾತಿನ ಚಕಮಕಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮೂಡಿಗೆರೆ-ದೇರಳಕಟ್ಟೆ -ಮಂಗಳೂರು ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿ
ಈ ಸಂದರ್ಭ ಅಧಿಕಾರಿ ಜಗನ್ನಾಥ್, ಚಾಲಕ ಹಾಗೂ ನಿರ್ವಾಹಕರಿಗೆ “ಇಷ್ಟವಾದ್ರೆ ತಗೊಂಡು ಹೋಗು, ಇಲ್ಲಾ ಅಂದ್ರೆ ಡಿಪೋ ಒಳಗೆ ಇಡಿ. ಕೆಎಸ್ಆರ್ಟಿಸಿಯಲ್ಲಿ ಇರೋದು ಇಂತಹ ಗಾಡಿಗಳೇ. ಅದೂ ಸ್ರ್ಯಾಪ್ಗೆ ಹಾಕುವ ಗಾಡಿ. ಹಳೆ ಗಾಡಿಗಳನ್ನು ಇಟ್ಕಂಡು ಡಿಪೋ ನಡೆಸುತ್ತಿದ್ದೇನೆ” ಎಂದಿದ್ದಾರೆ.
ಇದೇ ವೇಳೆಯಲ್ಲಿ ಅವರು ಆಕ್ಷೇಪಾರ್ಹ ಭಾಷೆಯಲ್ಲಿ ಅವರು ಮಾತನಾಡಿದ್ದು “ಕೆಎಸ್ಆರ್ಟಿಸಿಯಲ್ಲಿ ಇರೋದು ಸ್ರ್ಕಾಪ್, ಚಿಲ್ಲರೆ ಡ್ರೈವರ್ಗಳು, ಕೆಲಸ ಗೊತ್ತಿಲ್ಲದೇ ಇರುವ ಹಜಾಮ ನನ್ಮಕ್ಕಳು ಮೆಕ್ಯಾನಿಕ್ಗಳು” ಎಂದು ಹೇಳಿದ್ದಾರೆ.
ಈ ವೇಳೆ ಚಾಲಕ ಹಾಗೂ ಅಧಿಕಾರಿ ನಡುವೆ ವಾಗ್ವಾದ ನಡೆದಿದ್ದು ಕಂಡಕ್ಟರ್ ವಿರುದ್ದ ಆರೋಪ ಮಾಡಿದ ಜಗನ್ನಾಥ್ “ನಿನ್ನ ಕ್ಯಾಶ್ ಬ್ಯಾಗ್ ನೋಡಿದ್ದೀನಿ, ಟಿಕೆಟ್ ಕೊಡುವುದನ್ನು ನೋಡಿದ್ದೀನಿ. ನೀನು ದುಡ್ಡು ಕದಿಯುವುದನ್ನು ನೋಡಿದ್ದೀನಿ” ಎಂದು ನಿರ್ವಾಹಕನ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪಿಂಕ್ ಕೊಠಡಿ
ಇದಕ್ಕೆ ಉತ್ತರಿಸಿದ್ದ ನಿರ್ವಾಹಕ, “ನಾನು ಕದಿತಿನಿ, ಎಲ್ಲರೂ ಕದಿತಾರೆ, ಎಲ್ಲರೂ ಕಳ್ಳರೇ, ಎಲ್ಲಾ ಕದಿತಾರೆ, ಎಲ್ಲಾ ಕಳ್ಳನನ್ಮಕ್ಕಳೆ, ಯಾವನ್ ನೆಟ್ಟಗಿದ್ದಾನೆ? ನಾವೇನ್ ಮನೆಯಿಂದ ದುಡ್ಡು ತಂದಿಲ್ಲ, ನೀವು ಮನೆಯಿಂದ ತರ್ತಿರಾ ದುಡ್ಡುನ್ನ? ಬಂದು ಮೊದಲು ಫ್ಲಾಟ್ ಫಾರಂ ನೋಡಿ” ಎಂದು ಅಧಿಕಾರಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದೇ ವೇಳೆ ಕಿಡಿಕಾರಿದ ಚಾಲಕ, “ಸುಮ್ನೆ ಗಾಡಿ ಕೊಡೋದಲ್ಲಾ, ಗಾಡಿ ಹತ್ತಿ ನೋಡಿ ಎಲ್ಲಾ ತೂತಾಗಿದೆ. ಆದಾಯ ಏನು ನಮ್ಮ ಮನೆಗೆ ಕೊಡ್ತಿರಾ. ಯಾವನಾದ್ರು ಬಿದ್ದು ಸತ್ತರೆ ನಮ್ಮನ್ನು ಹಿಡಿದುಕೊಳ್ಳುತ್ತಾರೆ. ಯಾರದ್ದಾದ್ರೂ ಜೀವ ಹೋದರೆ ಯಾರು ಜವಾಬ್ದಾರಿ?” ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಗೆ ಸೇರುವ ಸಕಲೇಶಪುರ ಸಾರಿಗೆ ಬಸ್ ಡಿಪೋದ KA-18-F-0548 ನಂಬರ್ನ ಚಾಲಕ ಹಾಗೂ ನಿರ್ವಾಹಕರು ಆಕ್ಷೇಪವನ್ನು ಎತ್ತಿದ್ದಾರೆ. ಒಟ್ಟಿನಲ್ಲಿ ಅಧಿಕಾರಿ ಜಗನ್ನಾಥ್ ಹಾಗೂ ಚಾಲಕ, ನಿರ್ವಾಹಕ ನಡುವಿನ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿರುವುದಂತೂ ಸತ್ಯ.