ಚಿಕ್ಕಮಗಳೂರು: ಹೆಣ್ಣುಮಕ್ಕಳಿಗೆ ಪುಸ್ತಕದ ಜತೆಗೆ ಮಸ್ತಕದ ಜ್ಞಾನ ಅತಿ ಮುಖ್ಯ. ಹೆಣ್ಣು ಸಮಾಜದ ಹಾಗೂ ಕುಟುಂಬದ ಕಣ್ಣಿದ್ದಂತೆ. ಹೀಗಾಗಿ ಆರೋಗ್ಯದ ಬಗ್ಗೆ ಅರಿವಿರುವ ಹೆಣ್ಣು ಸಂಸಾರದ ಕಣ್ಣಾಗುತ್ತಾಳೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ತಿಳಿಸಿದರು.
ನಗರದ ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನಲ್ಲಿ ಎನ್ಎಸ್ಎಸ್, ವೈಆರ್ಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಎಚ್ಐವಿ, ಏಡ್ಸ್ ತಡೆಗಟ್ಟುವ ವಿಧಾನ ಹಾಗೂ ರಕ್ತದಾನದ ಮಹತ್ವ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ಯುವತಿಯರು ಆಸೆ ಆಮಿಷಕ್ಕೆ ಬಲಿಯಾಗದೆ ಜೀವನ ರೂಪಿಸಿಕೊಳ್ಳಬೇಕು. ಬಾಲ್ಯ ವಿವಾಹದಂಥ ಪಿಡುಗುಗಳನ್ನು ತೊಲಗಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ. ಲೈಂಗಿಕ ಶಿಕ್ಷಣದ ಅರಿವು ಇಲ್ಲದಿದ್ದರೆ ಹಲವು ರೋಗಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿನಿಯರು ಎಚ್ಚರಿಕೆ ವಗಹಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ ಪ್ರೊ. ಜೆ.ಕೆ.ಭಾರತಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿನಿಯರು ಪದವಿ ಶಿಕ್ಷಣದ ಜತೆಗೆ ಸ್ವಯಂ ಉದ್ಯೋಗ ಮಾಡುವ ಜ್ಞಾನ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ರಕ್ತದಾನ ಮಾಡುವವರು ದೇವರಿಗೆ ಸರಿಸಮಾನರು. ಏಕೆಂದರೆ ಸಂಕಷ್ಟದಲ್ಲಿರುವ ಒಂದು ಜೀವ ಉಳಿಸುವ ದೈವಾತ್ಮವಾಗುತ್ತಾರೆ ಎಂದು ತಿಳಿಸಿದರು.
ಉಪನ್ಯಾಸಕರಾದ ಸುನೀತಾ, ಎಂ.ಆರ್.ಚಂದ್ರಶೇಖರ್, ಎಸ್ಟಿಜೆ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಂತೋಷ್ಕುಮಾರ್ ಇತರರಿದ್ದರು.