ಗಂಗಾವತಿ (ಕೊಪ್ಪಳ): ಅಂಜನಾದ್ರಿ ಆಂಜನೇಯನ ದರ್ಶನಕ್ಕೆ ಉತ್ತರ ಪ್ರದೇಶದಿಂದ ಬಂದಿದ್ದ ಭಕ್ತರು ಹಾಗೂ ಸ್ಥಳೀಯರ ನಡುವೆ ಮಂಗಳವಾರ ಗಲಾಟೆ ನಡೆದಿದೆ. ಉತ್ತರ ಪ್ರದೇಶದ ಇಬ್ಬರಿಗೆ ಗಾಯಗಳಾಗಿದ್ದು, ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗಂಗಾವತಿ ತಾಲೂಕಿನ ಬಸವನ ದುರ್ಗಾ (ಕೊರಮ್ಮ ಕ್ಯಾಂಪ್) ಬಳಿ ಉತ್ತರ ಪ್ರದೇಶದ ವಾಹನಗಳು ಜೋರಾಗಿ ಬಂದಿದ್ದರಿಂದ ತಂತಿ ಕಟ್ ಆದ ಕಾರಣಕ್ಕೆ ಗಲಾಟೆ ಶುರುವಾಗಿದೆ.ವಾಹನ ಹಿಂಬಾಲಿಸಿದ ಗ್ರಾಮಸ್ಥರು ಅಡ್ಡ ಹಾಕಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆದಿದೆ. ವಾಹನದ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ್ದಾರೆ. ಇದರಿಂದ ಉತ್ತರ ಪ್ರದೇಶದ ರಾಮಕುಮಾರ್ ಹಾಗೂ ಮೋನು ಎಂಬುವರ ತಲೆಗೆ ಗಾಯಗಳಾಗಿವೆ. ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದ ಕುಪಿತಗೊಂಡ ಉತ್ತರ ಪ್ರದೇಶದ ಭಕ್ತರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.