ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮುಗಿಸುವಂತೆ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರನ್ನೂ ಹತ್ಯೆ ಮಾಡಿದವರಿಗೆ ಸಿದ್ದರಾಮಯ್ಯ ಅವರನ್ನು ಮುಗಿಸುವುದು ದೊಡ್ಡ ವಿಷಯವಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲ ಹೇಳಿದರು.
ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಮಯ ಮತ್ತು ಜಾಗವನ್ನು ನೀವು(ಬಿಜೆಪಿ) ನಿಗದಿ ಮಾಡಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ನಾನೇ ಕರೆದುಕೊಂಡು ಬರುತ್ತೇನೆ. ಅದು ಹೇಗೆ ಮುಗಿಸುತ್ತೀರೋ ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು. ನಮ್ಮನ್ನು ಬಿಜೆಪಿಯವರು ಕೊಲ್ಲಬಹುದು. ಆದರೆ ಅವರ ಗುಂಡು ಖಾಲಿ ಆಗಬಹುದೇ ವಿನಃ ನಮ್ಮ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದರು.
ಜಿಲ್ಲಾಧಿಕಾರಿಯೇ ಕರೆ ಮಾಡಲಿದ್ದಾರೆ !: ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್ ವಿತರಿಸಿ ತಮ್ಮ ಪರಿಚಯ ಮಾಡಿಕೊಂಡು ಭರವಸೆಗಳ ಬಗ್ಗೆ ತಿಳಿಸಬೇಕು. ಕಾರ್ಡ್ನಲ್ಲಿರುವ ಸಾರ್ವಜನಿಕರ ಮಾಹಿತಿಯುಳ್ಳ ಸ್ವೀಕೃತಿಯನ್ನು ಜಿಲ್ಲಾ ಕಾಂಗ್ರೆಸ್ ಅಥವಾ ಬ್ಲಾಕ್ ಕಾಂಗ್ರೆಸ್ ಕಚೇರಿಗಳಿಗೆ ತಲುಪಿಸಿ. ಸರ್ಕಾರ ರಚನೆ ಆದ ಮೇಲೆ ಸ್ವೀಕೃತಿಯಲ್ಲಿರುವ ಮೊಬೈಲ್ ನಂಬರ್ಗೆ ಜಿಲ್ಲಾಧಿಕಾರಿಯೇ ಕರೆ ಮಾಡಿ ಬ್ಯಾಂಕ್ ಖಾತೆ ನಂಬರ್ ಪಡೆದು ನೇರವಾಗಿ 2 ಸಾವಿರ ರೂ. ಆನ್ಲೈನ್ ಮೂಲಕ ಜಮಾ ಆಗುವಂತೆ ಮಾಡುವರು. ಅದೇ ಸ್ವೀಕೃತಿ ನಂಬರ್ನಿಂದ ವಿದ್ಯುತ್ ವಿಭಾಗಗಳ ಮೂಲಕ ಉಚಿತ ವಿದ್ಯುತ್ ನೀಡಲಾಗುವುದು. ಜತೆಗೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಭರವಸೆ ನೀಡಿದರು.