ಕೊಳ್ಳೇಗಾಲ : ಪಟ್ಟಣದ ಎಂಜಿಎಸ್ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಎರಡು ದಿನಗಳ ಹೊನಲು ಬೆಳಕಿನ ಪ್ರೊ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಚಾಮರಾಜನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದ್ದು, ಶಿವಪುರ ಈಗಲ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಈ ಪೈಕಿ 2 ಮಹಿಳಾ ತಂಡ ಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು. ಪ್ರಥಮ ಬಹುಮಾನ ಪಡೆದ ತಂಡಕ್ಕೆ ಭಾನುವಾರ ಆಕರ್ಷಕ ಟ್ರೋಫಿ ಮತ್ತು 25 ಸಾವಿರ ರೂ. ನಗದು ಹಾಗೂ ರನ್ನರ್ ಆಪ್ ತಂಡಕ್ಕೆ 10 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಹುಮಾನ ವಿತರಣೆ ಮಾಡಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಹೆಚ್ಚಿನ ರೀತಿಯಲ್ಲಿ ಕ್ರೀಡಾಕೂಟಗಳು ನಡೆಯಬೇಕು. ಎಲ್ಲರು ಸಾಮರಸ್ಯದಿಂದ ಒಗ್ಗೂಡಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ಅಭಿನಂದಿಸುತ್ತೇನೆ. ಕ್ರೀಡೆ ಕಡೆಗೆ ಯುವಕರನ್ನು ಪ್ರೇರಿಸುವ ನಿಟ್ಟಿನಲ್ಲಿ ಚೇತನ್ ದೊರೈರಾಜ್ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ, ಮಾಜಿ ಸದಸ್ಯ ಶಾಂತರಾಜು ಮುಡಿಗುಂಡ, ಆಯೋಜಕರಾದ ರಾಜಮ್ಮ, ಚೇತನ್ ದೊರೈರಾಜ್, ಮುಖಂಡರಾದ ಪುಟ್ಟಮಾದಯ್ಯ, ಆನಂದಮೂರ್ತಿ, ಲೋಕೇಶ, ಉನ್ನಿಕೃಷ್ಣನ್, ವಿನ್ಸೆಂಟ್, ಚೆಲುವರಾಜ್, ಪ್ರಜ್ವಲ್, ವಿನಯ್, ಶರತ್, ಸುಮನ್, ವಿನೋದ್, ಎಸ್.ಬಿ. ಶಿವಕುಮಾರ್, ಬಾಬು, ಹರ್ಷ ಮತ್ತಿತರಿದ್ದರು.