ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಅವರನ್ನು ಕಾರಿನಲ್ಲಿ ಎಳೆದೊಯ್ದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ದೆಹಲಿ ಪೊಲೀಸರ ಮೇಲೆ ಕಳಂಕ ಹೊರಿಸಲು ಆಮ್ ಆದ್ಮಿ ಪಾರ್ಟಿ ನೇಮಿಸಿದ ಸ್ವಾತಿ ಮಾಲಿವಾಲ್ ಆಡಿರುವ ಡ್ರಾಮಾ ಇದು ಎಂದು ಬಿಜೆಪಿ ಆರೋಪ ಮಾಡಿದೆ. ಇದಕ್ಕೆ ಸ್ವಾತಿ ಅವರು ತಿರುಗೇಟು ನೀಡಿದ್ದಾರೆ.
ಘಟನೆಯ ಬಗ್ಗೆ ಶುಕ್ರವಾರ ಅನುಮಾನ ವ್ಯಕ್ತಪಡಿಸಿದ ಬಿಜೆಪಿ, ಆರೋಪ ಮಾಡಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ಸದಸ್ಯೆ ಮತ್ತು ಆಕೆಯ ಡ್ರಾಮಾ ಕುತಂತ್ರದ ಭಾಗವಾಗಿದ್ದು, ಇದೀಗ ಬಟಾಬಯಲಾಗಿದೆ ಎಂದಿದೆ. ದೆಹಲಿ ಪೊಲೀಸರನ್ನು ನಿರುತ್ಸಾಹಗೊಳಿಸಿ, ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡುವ ತಂತ್ರ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ಸ್ವಾತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ, ಒಂದು ಸುದ್ದಿ ವಾಹಿನಿ ಮತ್ತು ಎಎಪಿ ಒಟ್ಟಾಗಿ ದೆಹಲಿ ಪೊಲೀಸರನ್ನು ದೂಷಿಸಲು ಈ ಸಂಚು ರೂಪಿಸಿದ್ದಾರೆ. ಆದರೆ, ಅದು ವಿಫಲವಾಗಿದೆ ಎಂದಿದ್ದಾರೆ.
ಬಿಜೆಪಿ ಸಂಸದ ಮನೋಜ್ ತಿವಾರಿ ಸಹ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವಾತಿ ಮಾಲಿವಾಲ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ, ಎಎಪಿ ಶಾಸಕನ ಪಕ್ಕದಲ್ಲಿ ನಿಂತು ಪೋಸ್ ನೀಡುತ್ತಿರುವ ಚಿತ್ರವನ್ನು ತಿವಾರಿ ಜೂಮ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆರೋಪಿಯನ್ನು ಶೀಘ್ರವಾದಿ ಬಂಧಿಸಿದ್ದಕ್ಕೆ ದೆಹಲಿ ಪೊಲೀಸರಿಗೆ ತಿವಾರಿ ಶ್ಲಾಘಿಸಿದ್ದು, ಈ ಘಟನೆ ವ್ಯವಸ್ಥಿತ ಡ್ರಾಮಾ ಎಂದು ಕರೆದಿದ್ದಾರೆ.
ಸ್ವಾತಿ ಮಾಲಿವಾಲ್ ತಿರುಗೇಟು
ಆರೋಪಗಳಿಗೆ ತಿರುಗೇಟು ನೀಡಿರುವ ಸ್ವಾತಿ ಮಾಲಿವಾಲ್, ನನ್ನ ಬಗ್ಗೆ ಕೊಳಕು ಸುಳ್ಳು ಹೇಳಿದರೆ ನಾನು ಹೆದರಿಕೊಳ್ಳುತ್ತೇನೆಂದು ಭಾವಿಸಿರುವವರಿಗೆ ನಾನೊಂದು ಮಾತು ಹೇಳುತ್ತೇನೆ. ನಾನು ಈ ಕ್ಷಣಿಕ ಜೀವನದಲ್ಲಿ ನನ್ನ ತಲೆಯ ಮೇಲೆ ಸಾವನ್ನು ಕಟ್ಟಿಕೊಂಡು ಅನೇಕ ದೊಡ್ಡ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮೇಲೆ ಅನೇಕ ಬಾರಿ ದಾಳಿ ಮಾಡಿದರೂ ನನ್ನ ಕೆಲಸದಿಂದ ಹಿಂಜರಿಯಲಿಲ್ಲ. ನನ್ನ ಮೇಲಿನ ಪ್ರತಿಯೊಂದು ಕ್ರೌರ್ಯ, ನನ್ನೊಳಗೆ ಮತ್ತು ಕಿಚ್ಚು ಹಚ್ಚಿದೆ. ನನ್ನ ಧ್ವನಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ನಾನು ಬದುಕಿರುವವರೆಗೂ ಹೋರಾಡುತ್ತಲೇ ಇರುತ್ತೇನೆ ಎಂದು ಸ್ವಾತಿ ಮಾಲಿವಾಲ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
जिनहें लगता है मेरे बारे में झूठी गंदी बातें कर मुझे डरा देंगे उनको बता दूँ। मैंने सर पे कफ़न बांध इस छोटी सी ज़िंदगी में बहुत बड़े काम किए है। मुझपे कई अटैक हुए पर मैं रुकी नही। हर अत्याचार से मेरे अंदर की आग और बढ़ी। मेरी आवाज़ कोई नही दबा सकता। जब तक ज़िंदा हूँ लड़ती रहूँगी!
— Swati Maliwal (@SwatiJaiHind) January 20, 2023
ಘಟನೆ ಹಿನ್ನೆಲೆ ಏನು?
ದೆಹಲಿಯ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಅವರ ಪ್ರಕಾರ ಜನವರಿ 19ರಂದು ಬೆಳಗಿನ ಜಾವ 3.11 ಕ್ಕೆ ಘಟನೆ ನಡೆಯಿತು. ಈ ಸಮಯದಲ್ಲಿ ಒಂದು ಪಿಸಿಆರ್ ಕರೆ ಬಂದಿತು. ಏಮ್ಸ್ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬಳನ್ನು ಕಾರಿನಲ್ಲಿ ಎಳೆದೊಯ್ಯಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಗರುಡ 1 (ದಕ್ಷಿಣ ಜಿಲ್ಲೆಯಲ್ಲಿ ವಿಶೇಷ ಗಸ್ತು ವಾಹನ) ಸಿಬ್ಬಂದಿಯೇ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದರು. ಏಮ್ಸ್ನ ಗೇಟ್ ನಂಬರ್ 2ರ ಎದುರಿಗಿರುವ ಫುಟ್ಪಾತ್ನಲ್ಲಿ ಮಹಿಳೆಯೊಬ್ಬಳು ನಿಂತಿರುವುದು ಕಂಡುಬಂದು, ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತು. ಆ ಮಹಿಳೆ ಸ್ವಾತಿ ಮಾಲಿವಾಲ್ ಎಂಬುದು ವಿಚಾರಣೆ ಬಳಿಕ ಗೊತ್ತಾಯಿತು.
ಓರ್ವ ವ್ಯಕ್ತಿ ಬಲೇನೋ ಕಾರು ಚಲಾಯಿಸುತ್ತಿದ್ದ. ಆತ ಕುಡಿದಿದ್ದ ಮತ್ತು ನನ್ನ ಬಳಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಳ್ಳುವಂತೆ ಕೆಟ್ಟ ಉದ್ದೇಶದಿಂದ ಕೇಳಿದ. ನಾನು ತಿರಸ್ಕರಿಸಿದಾಗ ಅಲ್ಲಿಂದ ಹೊರಟ ಆತ, ಮತ್ತೆ ಸರ್ವೀಸ್ ಲೇನ್ನಲ್ಲಿ ಯೂಟರ್ನ್ ಮಾಡಿಕೊಂಡು ಬಂದು, ಮತ್ತೆ ಕಾರಿನ ಒಳಗೆ ಕುಳಿತುಕೊಳ್ಳುವಂತೆ ಹೇಳಿದ. ನಾನು ಮತ್ತೆ ತಿರಸ್ಕರಿಸಿ, ಆತನಿಗೆ ಛೀಮಾರಿ ಹಾಕಲು ಚಾಲಕನ ಸೀಟಿನ ಪಕ್ಕ ತೆರಳಿದೆ. ಈ ವೇಳೆ ದಿಢೀರನೇ ಕಿಟಕಿ ಬಾಗಿಲು ಮುಚ್ಚಿದ. ನನ್ನ ಕೈ ಕಿಟಕಿ ಗಾಜಿನ ಮಧ್ಯೆ ಸಿಲುಕಿತು. ನಂತರ ಸುಮಾರು 10 ರಿಂದ 15 ಮೀಟರ್ ದೂರ ನನ್ನನ್ನು ಎಳೆದೊಯ್ದ ಎಂದು ಸ್ವಾತಿ ಮಾಲಿವಾಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಬಲೇನೋ ವಾಹನವನ್ನು ಬರುಡ ಗಸ್ತು ಪಡೆ ಅದೇ ದಿನ 3.34ಕ್ಕೆ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಮೊದಲು ಸಂತ್ರಸ್ತೆಯ ಗುರುತು ಪತ್ತೆಯಾಗಿರಲಿಲ್ಲ. ಆ ಬಳಿಕ ಸಂತ್ರಸ್ತೆ ಸ್ವಾತಿ ಮಾಲಿವಾಲ್ ಎಂದು ತಿಳಿಯಿತು. ಅವರು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ. ಕೋಟ್ಲಾ ಮುಬಾರಕ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಪ್ಲೀಸ್ ಸಹಾಯ ಮಾಡಿ ಪಠಾಣ್ ಸಿನಿಮಾ ಟಿಕೆಟ್ ಸಿಗದಿದ್ರೆ ಸಾಯ್ತಿನಿ: ಶಾರೂಖ್ ಅಭಿಮಾನಿಯ ಹುಚ್ಚಾಟ, ನೆಟ್ಟಿಗರ ತರಾಟೆ
ಯೂಟ್ಯೂಬ್ ಹಣದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ ಯುವಕ: 1 ತಿಂಗಳ ಸಂಪಾದನೆ ಕೇಳಿದ್ರೆ ಬೆರಗಾಗ್ತೀರಾ!
ವಿದ್ಯಾರ್ಥಿಯ ಅಸಭ್ಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಅಪರ್ಣಾ ಬಾಲಮುರಳಿ