| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಮಾರಿಗೋಲ್ಡ್
ನಿರ್ದೇಶನ: ರಾವೇಂದ್ರ ಎಂ ನಾಯಕ್
ನಿರ್ಮಾಣ: ರುವರ್ಧನ್
ತಾರಾಗಣ: ದಿಗಂತ್, ಸಂಗೀತಾ ಶೃಂಗೇರಿ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಸಂಪತ್ ಮೈತ್ರೇಯ, ವಜ್ರಾಂಗ್ ಶೆಟ್ಟಿ, ಮಹಾಂತೇಶ್ ಹಿರೇಮಠ್ ಮುಂತಾದವರು
ಆತ ಕೃಷ್ಣ (ದಿಗಂತ್). ಕ್ರಿಮಿನಾಲಜಿ ಓದಿಕೊಂಡಿರುವ ಖತರ್ನಾಕ್ ಕ್ರಿಮಿ. ಪೊಲೀಸ್ ಅಧಿಕಾರಿಗಳು ವಸೂಲಿ ಮಾಡಿ, ಡೀಲಿಂಗ್ಗಳನ್ನು ನಡೆಸಿ ಕೂಡಿಟ್ಟ 60 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನವನ್ನು ಲಪಟಾಯಿಸಲು ಪ್ಲಾ$್ಯನ್ ಮಾಡುತ್ತಾನೆ. ಆತನಿಗೆ ಬಾರ್ ಡಾನ್ಸರ್ ಸೋನು (ಸಂಗೀತಾ), ಸುಧಿ ಅಲಿಯಾಸ್ ಮುದ್ದೆ (ಸುಧಿ) ಮತ್ತು ಬಾಲಾಜಿ ಅಲಿಯಾಸ್ ಗಿಲ್ಕಿ (ಯಶ್) ಜತೆಯಾಗುತ್ತಾರೆ. ಜಾನಿ (ವಜ್ರಾಂಗ್) ಮತ್ತು ಗ್ಯಾಂಗ್ ಮೊದಲು ಆ ಚಿನ್ನವನ್ನು ದರೋಡೆ ಮಾಡುತ್ತಾರೆ. ಅವರಿಂದ ಅದನ್ನು ಕಿತ್ತುಕೊಳ್ಳುವ ಈ ಕೃಷ್ಣ ಮತ್ತು ಟೀಂ ಯತ್ನಿಸುತ್ತದೆ. ಮುಂದೆ? ಈ ಎರಡೂ ಗ್ಯಾಂಗ್ಗಳಲ್ಲಿ ಚಿನ್ನ ಯಾರ ಪಾಲಾಗುತ್ತದೆ? ಇವರನ್ನು ಬಿಟ್ಟು ಮೂರನೆಯವರೂ ಇದ್ದಾರಾ? ಪೊಲೀಸರಿಂದ ಚಿನ್ನ ಕದ್ದರೆ, ಅವರು ಸುಮ್ಮನೇ ಬಿಡುತ್ತಾರಾ? ಗೋಲ್ಡ್ ಎಂಬ ಮಾರಿಯನ್ನು ಹೆಗಲೇರಿಸಿಕೊಂಡವರ ಕಥೆ ಏನಾಗುತ್ತದೆ ಎಂಬುದೇ “ಮಾರಿಗೋಲ್ಡ್’.
ಇದುವರೆಗೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದಿಗಂತ್ ಇದೇ ಮೊದಲ ಬಾರಿಗೆ ರಾ, ರಗಡ್ ಪಾತ್ರದಲ್ಲಿ ನಟಿಸಿದ್ದು, ಗಮನ ಸೆಳೆಯುತ್ತಾರೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ಚಾಕ್ಲೇಟ್ ಲುಕ್ನಲ್ಲಿ ಮಿಂಚುತ್ತಿದ್ದ ದಿಗಂತ್, ಅವರ ಹೊಸ ರೂಪವನ್ನು ನೋಡುವುದೇ ಚಂದ. ಅವರಿಗೆ ಸರಿಸಮನಾಗಿ ಸಾಥ್ ನೀಡಿದ್ದಾರೆ ಸಂಗೀತಾ, ಸುಧಿ ಮತ್ತು ಯಶ್. ಇನ್ನು ದಿಗಂತ್ ಮತ್ತು ಸಂಪತ್ ಮೈತ್ರೇಯ ನಡುವಿನ ಜುಗಲ್ಬಂದಿ ಚಿತ್ರದ ಹೈಲೈಟ್. ರಾಘವೇಂದ್ರ ನಾಯಕ್ ಕಾಮಿಡಿ ಥ್ರಿಲ್ಲರ್ ಜಾನರ್ನ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವೆಡೆ ಫ್ಲ್ಯಾಶ್ಬ್ಯಾಕ್, ಕೆಲವೆಡೆ ರಿವರ್ಸ್ ಸ್ಕ್ರೀನ್ಪ್ಲೇ ಮೂಲಕ ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ವೀರ್ ಸಮರ್ಥ್ ಹಾಡುಗಳಲ್ಲಿ “ಸಿಹಿ ಜೇನಮಳೆ’ ಅಂದವಾಗಿದೆ. ಕೆ.ಎಸ್. ಚಂದ್ರಶೇಖರ್ ಕ್ಯಾಮರಾ ಕೈಚಳಕ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕೆ ಪೂರಕವಾಗಿವೆ. “ಭಾವನೆಗಿಂತ ಸಂಭಾವನೆ ಮುಖ್ಯ, ಮತ್ತೆ ಎಮೋಷನಲ್ ಫೂಲ್ ಆಗಬೇಡ…’, “ಕಾಫಿ ಬಿಜಿನೆಸ್, ಎಣ್ಣೆ ಬಿಜಿನೆಸ್ ಕಥೆ’, “ತಮಿಳುನಾಡು, ಬಳ್ಳಾರಿ ಕೈದಿಗಳ’ ಉದಾಹರಣೆ, “ಲಾಲಿಪಾಪ್ ತೋರಿಸಿ, ಕಿಡ್ನಿ ಕಿತ್ಕೊಂಡೋಗೋ ಕಿಲಾಡಿ ನನ್ಮಗ ನೀನು’, “ಕೆಲವರಿಗೆ ನೋಡಿದ ತಕ್ಷಣ ಹೇಸಿಗೆ ಅಂತ ಗೊತ್ತಾಗುತ್ತೆ, ಇನ್ನೂ ಕೆಲವರಿಗೆ ಟೇಸ್ಟ್ ಮಾಡಿದ್ಮೇಲೆ ಗೊತ್ತಾಗುತ್ತೆ’… ರಘು ನಿಡುವಳ್ಳಿ ಲೇಖನಿಯಿಂದ ಮೂಡಿಬಂದಿರುವ ಇಂತಹ ಹಲವು ಒನ್ಲೈನರ್ಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ. ದಿಗಂತ್ರನ್ನು ವಿಭಿನ್ನ ಅವತಾರದಲ್ಲಿ ನೋಡಲು ಇಷ್ಟಪಡುವವರು ಮತ್ತು ವಿಭಿನ್ನ ಥ್ರಿಲ್ಲರ್ ಜಾನರ್ ಅಭಿಮಾನಿಗಳಿಗೆ “ಮಾರಿಗೋಲ್ಡ್’ ಉಗಾದಿ ಹಬ್ಬದೂಟ!