ಕೊಲ್ಕತಾ: ನಂದಿಗ್ರಾಮಕ್ಕೆ ತೆರಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿನ್ನೆ (ಮಾರ್ಚ್ 10) ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬ್ಯಾನರ್ಜಿ ಅವರು ತಮ್ಮನ್ನು ನಾಲ್ಕೈದು ಜನ ಉದ್ದೇಶಪೂರ್ವಕವಾಗಿ ತಳ್ಳಿದ್ದರಿಂದ ಬಿದ್ದು ಏಟಾಯಿತು ಎಂದು ದೂರಿದ್ದರೆ, ಘಟನೆಯ ಪ್ರತ್ಯಕ್ಷದರ್ಶಿಗಳೆನ್ನುತ್ತಾ ಮೂವರು ನಾಗರೀಕರು ಮೂರು ಬೇರೆ ಬೇರೆ ವಿವರಣೆಯನ್ನು ನೀಡಿದ್ದಾರೆ!
ಘಟನೆ ಸ್ಥಳದಲ್ಲಿ ಮಿಠಾಯಿ ಅಂಗಡಿ ನಡೆಸುವ ನಿಮಾಯಿ ಮೈತಿ ಎಂಬುವರು, ದೀದಿ ಕಾರಿನಲ್ಲಿ ಕೂತಿರುವಾಗ ಅಕಸ್ಮಾತಾಗಿ ಕಾರಿನ ಬಾಗಿಲು ಅವರ ಕಾಲಿನ ಮೇಲೆ ಬಿದ್ದು ಏಟಾಗಿದೆ ಎಂದಿದ್ದಾರೆ. “ನನ್ನ ಅಂಗಡಿಯ ಮುಂದೆಯೇ ಈ ಘಟನೆ ನಡೆಯಿತು. ಸಂಜೆ 6.15 ರ ಸುಮಾರಿಗೆ ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ತಾನಕ್ಕೆ ತೆರಳುತ್ತಿದ್ದ ಮಮತಾ ಬ್ಯಾನರ್ಜಿ ಅವರ ಕಾರು ತಿರುವಿನ ಸಮೀಪ ನಿಂತಿತು. ವಾಹನದ ಹೊರಗೆ ಕಾಲು ಇಟ್ಟುಕೊಂಡು ಜನರಿಗೆ ವೇವ್ ಮಾಡುತ್ತಿದ್ದರು. ಆಗ ಜನರು ಒಟ್ಟಿಗೇ ಧಾವಿಸಿದಾಗ ಕಾರಿನ ಬಾಗಿಲು ಅವರ ಕಾಲಿನ ಮೇಲೆ ಧಡಕ್ಕನೆ ಹಾಕಿಕೊಂಡಿತು” ಎಂದು ಇಂಡಿಯಾ ಟುಡೇಗೆ ಇಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ದೀದಿ : ಕಾಲಿಗೆ ಫ್ರಾಕ್ಚರ್, ಭುಜಕ್ಕೆ ಮೂಗೇಟು
ನಿನ್ನೆ ಎಎನ್ಐ ನ್ಯೂಸ್ ಏಜೆನ್ಸಿ ಇಬ್ಬರು ಸ್ಥಳೀಯರು ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ಎಂಬುದಕ್ಕೆ ನೀಡಿರುವ ವಿವರಣೆಯನ್ನು ವರದಿ ಮಾಡಿದೆ. “ಸಿಎಂ ಅನ್ನು ನೋಡಲು ಜನರ ಗುಂಪು ಸೇರಿತ್ತು. ಅವರು ಇಲ್ಲಿಂದ ಹೊರಟ ಸಮಯದಲ್ಲಿ ಕೆಳಕ್ಕೆ ಬಿದ್ದು, ಕತ್ತು ಮತ್ತು ಕಾಲಿಗೆ ಗಾಯವಾಯಿತು. ಅವರನ್ನು ಯಾರೂ ತಳ್ಳಿಲ್ಲ, ಅವರನ್ನು ನೋಡುವುದಕ್ಕಾಗಿ ಜನ ಸೇರಿದ್ದರು ಅಷ್ಟೆ” ಎಂದು ಸುಮನ್ ಮೈತಿ ಎಂಬ ವಿದ್ಯಾರ್ಥಿ ಹೇಳಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ‘ಪ್ರತ್ಯಕ್ಷದರ್ಶಿ’ ಚಿರಂತನ್ ದಾಸ್, “ಮಮತಾ ಬ್ಯಾನರ್ಜಿ ದೇವಾಲಯಗಳಿಗೆ ಹೋಗಿ ವಾಪಸ್ ಬಂದು ತಮ್ಮ ಕಾರಿನ ಬಾಗಿಲು ತೆಗೆದುಕೊಂಡು ಕಾರಿನಲ್ಲಿ ಕೂತಿದ್ದರು. ಕಾರಿನ ಮುಂದೆ ಇದ್ದ ಹೋರ್ಡಿಂಗ್ ಒಂದು ಬಾಗಿಲ ಮೇಲೆ ಬಿದ್ದು, ಬ್ಯಾನರ್ಜಿ ಅವರ ಕತ್ತು ಮತ್ತು ಮಂಡಿಗೆ ಹೊಡೆಯಿತು” ಎಂದಿದ್ದಾರೆ.
ಇದನ್ನೂ ಓದಿ: “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ
ಹೀಗೆ ಮೂರು ಬೇರೆ ಬೇರೆ ವಿವರಣೆಗಳು ಬಂದಿರುವ ಬೆನ್ನಲ್ಲೇ, ಯಾರೊಬ್ಬ ಪ್ರತ್ಯಕ್ಷದರ್ಶಿಯೂ ಬ್ಯಾನರ್ಜಿ ಹೇಳಿದ ಹಾಗೆ ಅವರ ಮೇಲೆ ‘ಅಟ್ಯಾಕ್’ ಆಯಿತು ಎಂದು ಹೇಳಿಲ್ಲ ಎಂದು ಬಿಜೆಪಿ ತಕರಾರು ತೆಗೆದಿದೆ. “ಬ್ಯಾನರ್ಜಿ ನಂದಿಗ್ರಾಮದ ಜನರನ್ನು ಸುಮ್ಮನೆ ದೂಷಿಸುತ್ತಿದ್ದಾರೆ. ಹಲವು ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ ಇದೊಂದು ಆಕ್ಸಿಡೆಂಟ್ ಆಗಿದೆ. ಅವರ ಕಾಲು ಬಾಗಿಲ ಹೊರಗಿದ್ದಾಗ ಡ್ರೈವರ್ ಕಾರನ್ನು ಮುಂದಕ್ಕೆ ತೆಗೆದುಕೊಂಡಿದ್ದಾರೆ ಅನ್ನಿಸುತ್ತದೆ” ಎಂದು ಬಂಗಾಳ ಬಿಜೆಪಿ ಟ್ವೀಟ್ ಮಾಡಿದೆ.
ನಿಜವಾಗಿ ನಡೆದದ್ದೇನು ಎಂದು ತಿಳಿದುಕೊಳ್ಳಲು, ಚುನಾವಣಾ ಆಯೋಗವು, ಈ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲ್ಲಪನ್ ಬಂದ್ಯೋಪಾಧ್ಯಾಯ, ಆಯೋಗದ ಜನರಲ್ ಅಬ್ಸರ್ವರ್ ಅಜಯ್ ನಾಯಕ್ ಮತ್ತು ವಿಶೇಷ ಪೊಲೀಸ್ ಅಬ್ಸರ್ವರ್ ವಿವೇಕ್ ದುಬೆ ಅವರುಗಳಿಂದ ವರದಿ ಕೇಳಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!
ಹರಿಯಾಣ : ‘ಅವಿಶ್ವಾಸ’ವನ್ನು ಮಣಿಸಿದ ಬಿಜೆಪಿ-ಜೆಜೆಪಿ ಸರ್ಕಾರ