ಮುಂಬೈ: ಬಾಲಿವುಡ್ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಪಾಲಿಗೆ ವೃತ್ತಿವೈಷಮ್ಯ ಉರುಳಾಯಿತೇ ಎಂಬ ಬಗ್ಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಡಾ. ಆರ್.ಎನ್. ಕೂಪರ್ ಮುನ್ಸಿಪಲ್ ಸಾರ್ವಜನಿಕ ಆಸ್ಪತ್ರೆ ವೈದ್ಯರು ಸಲ್ಲಿಸಿರುವ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ನೇಣು ಬಿಗಿದುಕೊಂಡಿದ್ದರಿಂದಲೇ ಉಸಿರುಗಟ್ಟಿ ಸುಶಾಂತ್ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಆದರೆ, ಕೆಲವು ಮಾಧ್ಯಮಗಳಲ್ಲಿ ವೃತ್ತಿವೈಷಮ್ಯದಿಂದಾಗಿ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಆಯಾಮದಲ್ಲೂ ತನಿಖೆ ನಡೆಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸೋಮವಾರ ನಡೆದ ಸುಶಾಂತ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಶಾಂತ್ ಅವರ ಸ್ನೇಹಿತೆ ರಿಯಾ ಚಕ್ರವರ್ತಿ ಮತ್ತು
ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಬೆನ್ನಲ್ಲೇ ಅತ್ತಿಗೆ ಸಾವು
ಸ್ನೇಹಿತ ಮಹೇಶ್ ಶೆಟ್ಟಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಎನ್ನಲಾಗಿದೆ.
ಇವರೊಂದಿಗೆ ಇನ್ನೂ ಹಲವಾರು ಜನರನ್ನು ಪ್ರಶ್ನಿಸಲಾಗಿದೆ. ಅವರೆಲ್ಲರಿಂದಲೂ ಸುಶಾಂತ್ ಸಾವಿಗೆ ನಿಖರವಾದ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಯಿತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಸುಶಾಂತ್ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಿದ್ದಾರೆ. ಅಲ್ಲದೆ, ಕ್ರೈಂ ಬ್ರ್ಯಾಂಚ್-ಸಿಐಡಿ ಕೂಡ ತನಿಖೆ ಆರಂಭಿಸಿದ್ದಾರೆ. ಈ ಎರಡು ತಂಡದ ಅಧಿಕಾರಿಗಳೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸುಶಾಂತ್ ಅವರ ಫ್ಲ್ಯಾಟ್ಗೆ ಭೇಟಿ ನೀಡಿ ಪರಿಶೀಲಿಸಿದರು.