ಬೆಂಗಳೂರು: 2011ರ ಏಕದಿನ ವಿಶ್ವಕಪ್ ಟೂರ್ನಿ ಯಾರಿಗೆ ತಾನೆ ನೆನಪಿಲ್ಲ. ಭಾರತದ ಬಹುತೇಕ ಕ್ರೀಡಾಭಿಮಾನಿಗಳ ಮನಸಿನಲ್ಲಿ ಇನ್ನು ಅಚ್ಚ ಹಸಿರಾಗಿದೆ. 28 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕೋಟಿ ಕೋಟಿ ಅಭಿಮಾನಿಗಳ ಕನಸು ಈಡೇರಿದ ಟೂರ್ನಿ ಇದಾಗಿತ್ತು. 2ನೇ ಬಾರಿಗೆ ಭಾರತ ತಂಡ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 6 ವಿಕೆಟ್ಗಳಿಂದ ಮಣಿಸಿದ್ದು ಈಗ ಇತಿಹಾಸ. ಆದರೆ, ಈ ಪಂದ್ಯದಲ್ಲಿ ಎರಡು ಬಾರಿ ಟಾಸ್ ಹಾಕಲಾಯಿತು. ಇದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಕುಮಾರ ಸಂಗಾಕ್ಕರ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜೀವನಾಂಶಕ್ಕಾಗಿ ನವಾಜುದ್ದೀನ್ಗೆ ಪತ್ನಿ ಆಲಿಯಾ ಬೇಡಿಕೆ ಇಟ್ಟಿದ್ದು ಇಷ್ಟೊಂದು ಮೊತ್ತವಾ!?
ಅಂದಿನ ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಲಾಂಗ್ ಆನ್ನತ್ತ ಸಿಕ್ಸರ್ ಸಿಡಿಸಿ ಗೆಲುವಿನ ರನ್ ಬಾರಿಸಿದ ಧೋನಿ, ಕೋಟ್ಯಂತರ ಪಾಲಿನ ಭಾರತೀಯ ಕ್ರೀಡಾಭಿಮಾನಿಗಳಿಗೆ ಹೀರೋ ಆಗಿ ಮೆರೆದರು. ಇಡೀ ಕ್ರೀಡಾಂಗಣವನ್ನೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು ಅಂದಿನ ನಾಯಕ ಧೋನಿ. ಆದರೆ, ಟಾಸ್ ವೇಳೆ ನಾಯಕನೇ ಗೊಂದಲಕ್ಕೆ ಒಳಗಾಗಿದ್ದ ವಿಷಯ ಎಷ್ಟೋ ಮಂದಿಗೆ ಗೊತ್ತಿಲ್ಲ. ಗುರುವಾರ ಭಾರತ ತಂಡದ ಸದಸ್ಯ ಆರ್.ಅಶ್ವಿನ್ ಜತೆಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡಿದ ಸಂಗಾಕ್ಕರ, ಅಂದಿನ ಪಂದ್ಯದ ಟಾಸ್ ಘಟನೆಯನ್ನು ಮೆಲುಕು ಹಾಕಿದ್ದಾರೆ. ವಾಂಖೆಡೆ ಸ್ಟೇಡಿಯಂ ತುಂಬಿದ್ದರಿಂದ ಟಾಸ್ ಕೂಗಿದ್ದು ಸರಿಯಾಗಿ ಧೋನಿಗೆ ಕೇಳಿಸಲಿಲ್ಲ. ಧೋನಿ ಕಾಯಿನ್ ಎಸೆದಾಗ ನಾನು ಹೆಡ್ ಎಂದು ಕೂಗಿದೆ. ಆದರೆ, ಅದು ಧೋನಿಗೆ ಸರಿಯಾಗಿ ಕೇಳಿರಲಿಲ್ಲ. ಬಳಿಕ ಮಧ್ಯ ಪ್ರವೇಶಿಸಿದ ಮ್ಯಾಚ್ ರೆಫ್ರಿ ಮತ್ತೊಮ್ಮೆ ಟಾಸ್ ಹಾಕಿಸಿದರು. ಆಗ ಮತ್ತೊಮ್ಮೆ ನಾನು ಹೆಡ್ ಕೂಗಿದೆ. ಟಾಸ್ ನಾನೇ ಜಯಿಸಿದೆ ಎಂದು ಹೇಳಿದ್ದಾರೆ. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ಗೆ 274 ರನ್ ಗಳಿಸಿದರೆ, ಭಾರತ ತಂಡ 4 ವಿಕೆಟ್ಗೆ 277 ರನ್ ಗಳಿಸಿ ಜಯದ ನಗೆ ಬೀರಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ ಜತೆ ಕ್ವಾರಂಟೈನ್ ಕಷ್ಟ ಸುಖ…
ಆದರೆ, ಟಾಸ್ ಗೆದ್ದಿದ್ದನ್ನು ನಾನು ಲಕ್ ಎಂದು ಹೇಳಲಾರೆ, ನಾನು ಟಾಸ್ ಸೋತಿದ್ದರೆ, ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ವಿಶ್ವಕಪ್ ಟೂರ್ನಿಗಳಲ್ಲಿ ಸಾಕಷ್ಟು ಫೈನಲ್ ಪಂದ್ಯ ಸೋತಿದ್ದೇವೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇವೆ ಎಂದು ಸಂಗಾಕ್ಕರ ಹೇಳಿದ್ದಾರೆ. ಸೋಲು ಗೆಲುವಿನಲ್ಲಿ ಲಂಕಾ ಜನತೆ ನಮ್ಮನ್ನು ಬೆಂಬಲಿಸಿದ್ದಾರೆ ಎಂದರು. 1996ರ ಬಳಿಕ 2007, 2011ರ ಏಕದಿನ, 2009, 2012ರ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಲಂಕಾ ತಂಡ ಫೈನಲ್ ಪ್ರವೇಶಿಸಿದೆ.