ಸಭ್ಯ ನಡವಳಿಕೆಗಳನ್ನು ಸದ್ವೃತ್ತವೆಂಬ ಹೆಸರಿನಲ್ಲಿ ತಿಳಿಹೇಳಿರುವ ಆಯುರ್ವೇದ ಗ್ರಂಥಗಳು ಬದುಕಿನ ವಿವಿಧ ದೃಷ್ಟಿಕೋನಗಳನ್ನು ಪರಾಮರ್ಶಿಸಿವೆ. ಜೀವನವು ಸದಾ ಸಂತಸದಿಂದ ಕೂಡಿರಬೇಕಾದರೆ ಯಾವೆಲ್ಲ ವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಎಳೆಎಳೆಯಾಗಿ ಬಿಡಿಸಿ ಹೇಳಿವೆ. ದೇವರು, ಭೂಮಿಯಲ್ಲಿರುವ ದೇವಸಮಾನರು, ವೃದ್ಧರು, ವೈದ್ಯರು, ಆಳುವ ದೊರೆಗಳು, ಅತಿಥಿಗಳ ಸೇವೆ ಮಾಡಿ ಗೌರವದಿಂದ ನೋಡಿಕೊಳ್ಳಬೇಕು. ದಯೆಯಿಲ್ಲದೆ ಭಿಕ್ಷುಕರನ್ನು ಅಲಕ್ಷಿಸುವುದು ಮತ್ತು ಯಾರನ್ನೇ ಆದರೂ ಅವಮಾನಿಸುವುದು ಸನ್ನಡತೆಯಲ್ಲ.
ಭಾವಪ್ರಕಾಶವೆಂಬ ಗ್ರಂಥದ ಈ ಮಾತು ಚರಕಸಂಹಿತೆಯಲ್ಲಿಯೂ ಇದೆ. ದೇವರು, ಗೋವುಗಳು, ವಿಪ್ರರು, ಗುರುಗಳು, ವೃದ್ಧರು, ಸಿದ್ಧರು, ಶಿಕ್ಷಕರಿಗೆ ಗೌರವ ಸಲ್ಲಿಸಬೇಕು. ಅಗ್ನಿಗೆ ಆಹುತಿ ಸಮರ್ಪಿಸುವಂಥ ಧರ್ಮಕರ್ಮಗಳನ್ನು ಮುಂಜಾನೆ ಹಾಗೂ ಮುಸ್ಸಂಜೆ ಹೊತ್ತಿನಲ್ಲಿ ಅನುಷ್ಠಾನಗೊಳಿಸಬೇಕು. ಒಳ್ಳೆಯವರ ಜೊತೆ ಮೈತ್ರಿ, ಸಜ್ಜನರ ಸಹವಾಸ, ಸಾಧುಜನರ ಸಂಸರ್ಗ ಮಾಡಬೇಕು, ದುರ್ಜನರಿಂದ ದೂರವಿರಬೇಕು. ಗುರುಹಿರಿಯರ ಮುಂದೆ ವಿನಯವಂತರಾಗಿದ್ದು ಅವರೆದುರು ಕಾಲುಗಳನ್ನು ನೀಡಿ ಕುಳಿತುಕೊಳ್ಳುವ ಚೇಷ್ಟೆ ಮಾಡಬಾರದು. ಪುರೋಹಿತರಂಥ ವಿದ್ವಜ್ಜನರನ್ನು ಹಳಿಯಬಾರದು, ಗೋವುಗಳಿಗೆ ಕೋಲಿನಿಂದ ಹೊಡೆಯಬಾರದು, ಹಿರಿಯರನ್ನು, ಗುರುಗಳನ್ನು, ದೇಶ ಕಾಯುವವರನ್ನು, ರಾಜರನ್ನು ನಿಂದಿಸಬಾರದು. ಪೂಜ್ಯರಿಬ್ಬರ ಮಧ್ಯದಿಂದ ಅಥವಾ ದಂಪತಿಯ ನಡುವೆ ಹೋಗುವುದು ತೆರನಲ್ಲ. ವಿರೋಧಿಗಳು ನೀಡಿದ ಆಹಾರವನ್ನಾಗಲೀ, ವೇಶ್ಯೆ ಕೊಟ್ಟ ಭೋಜನವನ್ನಾಗಲೀ ಸ್ವೀಕರಿಸಕೂಡದು. ಅತಿಥಿಗಳನ್ನು ಸತ್ಕರಿಸಿ, ಪಿತೃಗಳಿಗೆ ಶ್ರಾದ್ಧಾದಿಗಳ ಕಾಲದಲ್ಲಿ ಪಿಂಡ ಪ್ರದಾನ ಮಾಡಿ, ಕಾಲಕ್ಕೆ ಸರಿಯಾಗಿ ಹಿತವಾದ, ಮಿತವಾದ, ಮಧುರವಾದ, ಅರ್ಥವತ್ತಾದ ಮಾತುಗಳನ್ನಾಡಬೇಕು. ಸೂರ್ಯ, ಚಂದ್ರ, ಯಮ, ಕಾಲ ಹಾಗೂ ಪಂಚಮಹಾಭೂತಗಳು ನಮ್ಮ ಶುಭ ಅಶುಭಗಳಿಗೆ ಒಂಬತ್ತು ಸಾಕ್ಷಿಗಳಾಗಿದ್ದು ಅವುಗಳ ಬಗ್ಗೆ ಗೌರವ ಭಾವವಿರಬೇಕು.
ಕಷ್ಟದಲ್ಲಿರುವವರಿಗೆ ನೆರವಾಗುತ್ತ, ಅರ್ಹರಿಗೆ ದಾನ ಮಾಡುತ್ತ, ಕೂಡುರಸ್ತೆಗಳಲ್ಲಿ ಜಾಗರೂಕರಾಗಿದ್ದು, ಹಸಿದವರಿಗೆ ಊಟ ನೀಡುತ್ತಿರಬೇಕು. ಸಜ್ಜನರನ್ನು ಹಾಗೂ ಗುರುಗಳನ್ನು ನಿಂದನೆ ಮಾಡಬಾರದು. ತಾನು ಸ್ವತಃ ಶುಚಿಯಾಗಿಲ್ಲದೆ ಪವಿತ್ರ ಮರಗಳನ್ನಾಗಲೀ, ಪೂಜ್ಯ ಜನರನ್ನಾಗಲೀ ಪೂಜಿಸಬಾರದು ಹಾಗೂ ಅಧ್ಯಯನ ಮಾಡಬಾರದು. ಗಾಳಿ, ಬೆಂಕಿ, ನೀರು, ಚಂದ್ರ, ಸೂರ್ಯ, ಗುರುಹಿರಿಯರುಗಳಿಗೆ ಮುಖ ಮಾಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಆಹಾರ ಸೇವಿಸುತ್ತಿರುವಾಗ ಕಫ, ಮಲ, ಮೂತ್ರಾದಿಗಳನ್ನು ವಿಸರ್ಜಿಸಕೂಡದು. ಜಪ, ಹೋಮ, ಅಧ್ಯಯನ, ಮಂಗಲಕಾರ್ಯಗಳ ಸಂದರ್ಭದಲ್ಲಿ ಮೂಗಿನಿಂದ ಕಫವನ್ನು ಹೊರತೆಗೆಯಕೂಡದು. ಪವಿತ್ರ ಮರ, ಧ್ವಜ, ಗುರು, ಪೂಜ್ಯರ ನೆರಳಿನಲ್ಲಿ ಓಡಾಡಕೂಡದು ಅರ್ಥಾತ್ ಅವರಿಗೆ ಸುತ್ತುಗಟ್ಟಿ ಸನಿಹದಲ್ಲಿದ್ದು ಅಗೌರವ ಸೂಚಿಸಕೂಡದು, ಅಂತಹ ಸ್ಥಳಗಳ ಪಾವಿತ್ರ್ಯೆಯನ್ನು ಕಾಪಾಡಬೇಕು.
ಇದನ್ನೆಲ್ಲ ಸಾಮಾನ್ಯ ಸಂದರ್ಭಗಳಲ್ಲಿ ಓದಿದರೆ ಕೆಲವರಾದರೂ ಏನಿದೆಯೆಂದು ಅಂದುಕೊಂಡಾರು. ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ವಾಕ್ಯವೂ ಮಹತ್ವಪೂರ್ಣವಾಗುತ್ತದೆ. ರಾಮರಾಜ್ಯ ಸ್ಥಾಪನೆಯಾಗಬೇಕಾದರೆ ಇವೆಲ್ಲ ಬೇಕು. ಉಳಿದವರಿಗೆ ನಾವು ಗೌರವ ಕೊಟ್ಟರೆ ಗೌರವ ಸ್ವತಃ ಪಡೆದಂತೆಯೇ ಸರಿ.
ಪ್ರಚಾರಕ್ಕಾಗಿ 20 ಸಾವಿರ ರೂಪಾಯಿ ತರಕಾರಿ ಖರೀದಿಸಿದ ಮಾಜಿ ಶಾಸಕ ಬಾಲಕೃಷ್ಣ: ಎಚ್ಡಿಕೆ ವಾಗ್ದಾಳಿ