ರಾಜ್ಕೋಟ್: ಇಲ್ಲಿನ ನಿರಂಜನ್ ಷಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಜಾಗಕ್ಕೆ ಬದಲಿ ಆಟಗಾರನನ್ನು ನೇಮಿಸಲಾಗಿದ್ದು, ಕರ್ನಾಟಕ ಮೂಲದ ಆಟಗಾರ ರಾಷ್ಟ್ರೀಯ ತಂಡದ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಟೀಂ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಸರಣಿಯಿಂದ ದಿಢೀರ್ ಎಂದು ಹಿಂದೆ ಸರಿದ ಕಾರಣ ಅವರ ಜಾಗಕ್ಕೆ ಬದಲಿ ಆಟಗಾರನನ್ನು ನೇಮಿಸಲಾಗಿದೆ. ಅಶ್ವಿನ್ ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ದಿಢೀರ್ ತಂಡವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ.
ಆರ್. ಅಶ್ವಿನ್ ಬದಲಿಗೆ ಸಬ್ಸ್ಟ್ಯೂಟ್ ಫೀಲ್ಡರ್ ಆಗಿ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದಾರೆ. ವಿಶೇಷ ಎಂದರೆ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಕಣಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಗೆ. ಈ ಹಿಂದೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದ ಪಡಿಕ್ಕಲ್ ಇದೀಗ ರೆಡ್ ಬಾಲ್ ಕ್ರಿಕೆಟ್ನಲ್ಲೂ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ ಹಗರಣ; ಕೊನೆಗೂ ನ್ಯಾಯಾಲಯಕ್ಕೆ ಹಾಜರಾದ ಕೇಜ್ರಿವಾಲ್
ದೇವದತ್ ಪಡಿಕ್ಕಲ್ ಮೂರನೇ ಟೆಸ್ಟ್ ಪಂದ್ಯಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ತೊಡೆಸಂಧು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಬದಲಿಗೆ ಪಡಿಕ್ಕಲ್ಗೆ ಸ್ಥಾನ ನೀಡಲಾಗಿದೆ. ಅದರಂತೆ ಇದೀಗ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಫೀಲ್ಡಿಂಗ್ ಮಾಡಲು ಪಡಿಕ್ಕಲ್ ಕಣಕ್ಕಿಳಿದಿದ್ದಾರೆ.
ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ಕೋವಿಡ್ ಕಾರಣ ಅಥವಾ ಗಾಯದ ಕಾರಣ ಆಟಗಾರನೊಬ್ಬ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿದರೆ ಮಾತ್ರ ಬದಲಿ ಆಟಗಾರ ತಂಡದ ಪರ ಆಡಬಹುದಾಗಿದೆ.