ವಿಜಯಪುರ: ಲಂಬಾಣಿ ಸೇರಿದಂತೆ ಐದು ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಡಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೈ ಜೋಡಿಸುತ್ತಿವೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿ ಜನರಲ್ಲಿ ಆತಂಕವನ್ನುಂಟು ಮಾಡುತ್ತಿವೆ. ಅಂತಹ ಹಿತಾಸಕ್ತಿಗಳಿಗೆ ಸರ್ಕಾರ ಮಣೆ ಹಾಕಬಾರದು ಎಂದು ಶಾಸಕ ದೇವಾನಂದ ಚವಾಣ್ ತಿಳಿಸಿದ್ದಾರೆ.
ಲಂಬಾಣಿ ಸಮುದಾಯ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಿದ್ದು ಈ ಸಮಾಜದ ಶೇ. 90ರಷ್ಟು ಜನ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ. ಈ ಸಮಾಜದ ಸಂಪೂರ್ಣ ಅಭಿವೃದ್ಧಿಯಾಗಬೇಕೆಂದರೆ ಮೀಸಲಾತಿ ಅವಶ್ಯಕತೆ ಇದೆ. ಲಂಬಾಣಿ ಸಮುದಾಯಕ್ಕೆ ಮೀಸಲಾತಿ ಕಾನೂನು ಬದ್ಧವಾಗಿ ದೊರಕಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನಿಕ ಹಕ್ಕನ್ನು ಪಡೆಯಲಾಗಿದೆ. ಆದರೆ ಕೆಲ ಸಂಚುಕೋರರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.