ದೇವರಹಿಪ್ಪರಗಿ: ಮಹಾರಾಷ್ಟ್ರದಲ್ಲಿ ಕರೊನಾ ಹೆಚ್ಚಿದೆ, ಅಲ್ಲಿ ದುಡಿಯಲು ಹೋಗಿ ಮರಳಿ ಬಂದ ಕಾರ್ಮಿಕರಿಗೆ ರೋಗ ಇದೆ ಎಂಬ ಭಯ ಬೇಡ. ಅವರೆಲ್ಲರೂ ಆರೋಗ್ಯವಂತರಾಗಿದ್ದಾರೆ ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ತಾಲೂಕಿನ ಪಡಗಾನೂರ ಗ್ರಾಮ ಹಾಗೂ ದೇವರಹಿಪ್ಪರಗಿ ಪಟ್ಟಣದ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿ, ಕಾರ್ಮಿಕರಿಗೆ ಉಪಾಹಾರ ಹಾಗೂ ಮಕ್ಕಳಿಗೆ ಬಿಸ್ಕೆಟ್ ವಿತರಿಸಿ ಅವರು ಮಾತನಾಡಿದರು.
ಕರೊನಾ ಎಂಬ ಮಹಾಮಾರಿಯಿಂದ ನಾವೆಲ್ಲ ಪಾರಾಗಲು, ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲನೆ ಮಾಡಬೇಕು. ಸರ್ಕಾರ ಈಗಾಗಲೇ ನಿಮಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಅನ್ನ-ಸಾಂಬರ ಹಾಗೂ ರಾತ್ರಿ ಊಟಕ್ಕೆ ಮಸಾಲಿ ರೈಸ್ ನೀಡುತ್ತಿದೆ. ನನ್ನ ಸ್ವಂತ ಖರ್ಚಿನಲ್ಲಿ ಸಿಹಿ ಊಟಕ್ಕೆ ವ್ಯವಸ್ಥೆ ಮಾಡುತ್ತೇನೆ. ಜತೆಗೆ ಕ್ವಾರಂಟೈನ್ನಲ್ಲಿದ್ದ ಮಹಿಳೆಯರು ರೊಟ್ಟಿ, ಚಪಾತಿ ಮಾಡಿಕೊಳ್ಳುತ್ತೇನೆಂದರೆ ಅವರಿಗೆ ಬೇಕಾದಷ್ಟು ದವಸಧಾನ್ಯ ವಿತರಿಸಲಾಗುವುದು. ಕ್ವಾರಂಟೈನ್ನಲ್ಲಿ ಇದ್ದ ಕಾರ್ಮಿಕರಿಗೆ ಯಾವುದೇ ತರಹದ ತೊಂದರೆಯಾಗದಂತೆ ತಾಲೂಕಾಡಳಿತ ನಿಗಾ ವಹಿಸಬೇಕೆಂದು ಸ್ಥಳದಲ್ಲಿದ್ದ ತಹಸೀಲ್ದಾರ್ಗೆ ಸೂಚಿಸಿದರು.
ನಿತ್ಯ ಆರೋಗ್ಯ ಇಲಾಖೆ ವೈದ್ಯರು ಬಂದು ಎಲ್ಲ ಕಾರ್ಮಿಕರಕ ಆರೋಗ್ಯ ತಪಾಸಣೆ ಮಾಡಬೇಕೆಂದು ಅವರು ಸೂಚಿಸಿದರು. ನಿಮ್ಮೊಂದಿಗೆ ನಾನಿದ್ದೇನೆ. ನಿಮಗೆ ಯಾವುದೇ ತರಹದ ಸಮಸ್ಯೆಗಳಿದ್ದರೇ ನನ್ನ ಗಮನಕ್ಕೆ ತನ್ನಿ, ಯಾವುದಕ್ಕೂ ಎದೆಗುಂದದಿರಿ ಎಂದು ಹೇಳಿದರು.
ತಹಸೀಲ್ದಾರ್ ವೈ.ಬಿ. ನಾಗಠಾಣ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಸುರೇಶಗೌಡ ಪಾಟೀಲ ಸಾಸನೂರ, ಜಿಪಂ. ಸದಸ್ಯರ ಪ್ರತಿನಿದಿ ಸಿದ್ದು ಬುಳ್ಳಾ, ತಾಪಂ. ಸದಸ್ಯ ಶ್ರೀಶೈಲ ಕಬ್ಬಿನ, ಸಾಹೇಬಗೌಡ ಪಾಟೀಲ ಸಾಸನೂರ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ ಮತ್ತಿತರರು ಇದ್ದರು.