ಕುಕನೂರು: ತಳಕಲ್ ಸರ್ಕಾರಿ ಇಂಜಿನಿಯರ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಶಿವಕುಮಾರ ಎಂ. ಅವರನ್ನು ನಮ್ಮ ವಿಭಾಗದಿಂದ ಬಿಡುಗಡೆಗೊಳಿಸಬೇಕೆಂದು 3, 5 ಹಾಗೂ 7ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಬುಧವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಎಚ್ಒಡಿ ಶಿವಕುಮಾರ ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಮಾಹಿತಿ ಕೇಳಲು ಹೋದರೆ ಪ್ರತಿಕ್ರಿಯೆ ನೀಡುವುದಿಲ್ಲ ಹಾಗೂ ಬೆದರಿಸಿ ವಿಭಾಗದಿಂದ ಹೊರಗೆ ಕಳಿಸುತ್ತಾರೆ.
ಇದನ್ನೂ ಓದಿ: ದಾವಣಗೆರೆ ತಹಸೀಲ್ದಾರ್ ದುರ್ವರ್ತನೆಗೆ ಸಿಬ್ಬಂದಿ ಪ್ರತಿಭಟನೆ
ಅಲ್ಲದೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಭಯ ಪಡಿಸುತ್ತಾರೆ. ವಿದ್ಯಾರ್ಥಿಗಳ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಾರೆ. ಪಾಲಕರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದು ದೂರಿದರು.
ಪಠ್ಯಕ್ರಮ ಪೂರ್ಣಗೊಂಡಿಲ್ಲದಿದ್ದರೂ ಆಂತರಿಕ ಪರೀಕ್ಷೆ ನಡೆಸಲಾಗುತ್ತಿದೆ. ಆಂತರಿಕ ಪರೀಕ್ಷೆ ಮುಂದೂಡುವಂತೆ ಕೇಳಿದರೆ ನೀವು ವಿಭಾಗದ ಮುಖ್ಯಸ್ಥನಾ, ಸಿಎಂ, ಪ್ರಧಾನಿ ಅಥವಾ ರಾಜಕೀಯ ವ್ಯಕ್ತಿನಾ ಎಂದು ಪ್ರಶ್ನೆ ಮಾಡುತ್ತಾರೆ.
ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಕುರಿತು ನನಗೆ ಬೇರೆ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಮನವಿಯನ್ನು ಮತ್ತೊಮ್ಮೆ ಅಧಿಕಾರಿಗಳಿಗೆ ತಲುಪಿಸಲಾಗುವುದು.
| ವಿರೂಪಾಕ್ಷಿ ಬಾಗೋಡಿ, ಪ್ರಾಚಾರ್ಯ, ಸರ್ಕಾರಿ ಇಂಜಿನಿಯರ್ ಕಾಲೇಜು, ತಳಕಲ್