ತ್ರಿಸ್ಸೂರ್: ಕೇರಳದ ದಂತ ವೈದ್ಯೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಬಚಾವ್ ಆಗಲು ತಿಸ್ಸೂರ್ನಲ್ಲಿ ಸಾಕಷ್ಟು ಅಡಗುತಾಣಗಳನ್ನು ಹುಡುಕಾಡಿದೆ ಎಂದಿದ್ದಾನೆ.
ಪವರಟ್ಟಿ ಮೂಲದ ಮಹೇಶ್, ಸೆಪ್ಟೆಂಬರ್ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್ನಲ್ಲಿ ಕುಟುಂಬದ ಎದುರೇ ಚಾಕು ಇರಿದಿದ್ದ. ಹಲ್ಲೆ ಮಾಡಿದ ಬಳಿಕ ಪರಾರಿ ತ್ರಿಸ್ಸೂರ್ನಲ್ಲಿ ಬಚ್ಚಿಕೊಳ್ಳಲು ಯತ್ನಿಸಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 4ರಂದು ತ್ರಿಸ್ಸೂರ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ ಪೂನಕುನ್ನಮ್ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!
ಇದಕ್ಕೂ ಮುನ್ನ ಆತನೇ ಶರಣಾಗಲು ಚಿಂತಿಸಿದ್ದ ಎಂದು ವರದಿಯಾಗಿದೆ. ಕೊಲೆ ಮಾಡಿದ ಬಳಿಕ ತ್ರಿಸ್ಸೂರ್ನ ಕುನ್ನಮ್ಕುಲಂ ಮತ್ತು ಕೊಡಂಗುಲ್ಲರ್ನಲ್ಲಿ ಬಚ್ಟಿಟ್ಟುಕೊಂಡಿದ್ದಾಗಿ ಸ್ವತಃ ಆರೋಪಿ ಮಹೇಶ್ ಹೇಳಿಕೊಂಡಿದ್ದಾನೆ. ನಾನು ಸೋನಾಳ ಉದ್ಯಮ ಪಾಲುದಾರನಾಗಿದ್ದೆ. ಆಕೆ ತ್ರಿಸ್ಸೂರ್ನಲ್ಲಿ ಬಿಡಿಎಸ್ ಅಧ್ಯಯನ ಮಾಡುವಾಗ ನನಗೆ ಪರಿಚಯವಾದಳು. ಡಿವೋರ್ಸ್ ನಂತರ ತ್ರಿಸ್ಸೂರ್ಗೆ ಮರಳಿ ಕುರಿಯಾಚಿರಾ ಏರಿಯಾದಲ್ಲಿರುವ ಫ್ಲ್ಯಾಟ್ನಲ್ಲಿ ನನ್ನೊಂದಿಗೆ ಲಿವ್ ಇನ್ ರಿಲೇಷನ್ನಲ್ಲಿದ್ದಳು. ಎರಡು ವರ್ಷಗಳ ಹಿಂದೆ ಕುಟ್ಟನೆಲ್ಲೂರಿನಲ್ಲಿ ನಾನು ಮತ್ತು ಸೋನಾ ಡೆಂಟಲ್ ಕ್ಲಿನಿಕ್ ಸ್ಥಾಪಿಸಿದ್ದೆವು ಎಂದು ಮಹೇಶ್ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ.
ಕ್ಲಿನಿಕ್ಗೆ ನಾನು ಸಹ ಬಂಡವಾಳ ಹೂಡಿದ್ದೆ. ಕ್ಲಿನಿಕ್ ಆರಂಭವಾದಾಗಿನಿಂದ ಸೋನಾ ನನಗೆ ಲಾಭವಾಗಲಿ ಅಥವಾ ಬಂಡವಾಳದ ಹಣವನ್ನಾಗಲಿ ಹಂಚಿಕೊಳ್ಳಲಿಲ್ಲ. ಕೇಳಿದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕ್ಲಿನಿಕ್ನಿಂದ ಬರುವ ಇಡೀ ಆದಾಯವನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಮಹೇಶ್ ಹೇಳಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ: ಹಾಥರಸ್ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ: ಇತ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಗನ ಬಂಧನ!
ಕೊಲೆಗೂ ಮುನ್ನ ಸೋನಾ, ಮಹೇಶ್ ವಿರುದ್ಧ ದೂರು ಸಹ ನೀಡಿದ್ದಳು. ಇದೂ ಕೂಡ ಸೊನಾ ಕೊಲೆಗೆ ಕಾರಣವಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಮಹೇಶ್ ವಿರುದ್ಧ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. (ಏಜೆನ್ಸೀಸ್)
ಯುವ ದಂತ ವೈದ್ಯೆಗೆ ಮುಳುವಾಯ್ತು ಲಿವ್ ಇನ್ ರಿಲೇಷನ್: ಕ್ಲಿನಿಕ್ ಲ್ಯಾಬ್ನಲ್ಲಿ ನಡೆಯಿತು ದುರಂತ!