ಎರ್ನಾಕುಲಂ: ಪ್ರಿಯಕರನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವ ದಂತ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಮುವಟ್ಟುಪುಜದಲ್ಲಿ ಭಾನುವಾರ ನಡೆದಿದೆ.
ಡಾ. ಸೋನಾ (30) ಮೃತ ವೈದ್ಯೆ. ತ್ರಿಸ್ಸೂರ್ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 28ರಂದು ಪ್ರಿಯಕರ ಮಹೇಶ್ ಎಂಬಾತನಿಂದ ಸೋನಾ ಚಾಕು ಇರಿತಕ್ಕೆ ಒಳಗಾಗಿದ್ದರು. ಆರೋಪಿ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.
ಸೋನಾ ಒಂದೂವರೆ ವರ್ಷದಿಂದ ತ್ರಿಸ್ಸೂರ್ನ ಒಲ್ಲೂರು ಬಳಿಯ ಕುಟ್ಟನೆಲ್ಲೂರಿನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ರೊಂದಿಗೆ ಲಿವ್ ಇನ್ ರಿಲೇಷನ್ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಮಹೇಶ್ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ.
ಹೀಗಿರುವಾಗ ಹಣಕಾಸು ವಿಚಾರವಾಗಿ ಇತ್ತೀಚೆಗಷ್ಟೇ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದರ ನಡುವೆ ಸೋನಾ ಕಳೆದ ವಾರ ಮಹೇಶ್ ವಿರುದ್ಧ ಒಲ್ಲೂರ್ ಪೊಲೀಸ್ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಿದ್ದರು. ಕ್ಲಿನಿಕ್ನಿಂದ ಬರುತ್ತಿದ್ದ ಆದಾಯವನ್ನು ಅಕ್ರಮವಾಗಿ ತೆಗೆದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಇಎಂಐ ಕಟ್ಟಿದವರಿಗೆ ಕ್ಯಾಷ್ಬ್ಯಾಕ್? : ಮಾರಟೋರಿಯಂ ಪಡೆಯದವರಿಗೂ ಸಿಗಲಿದೆ ಕೇಂದ್ರದ ಸವಲತ್ತು
ದೂರಿನ ಅನ್ವಯ ಪೊಲೀಸರು ಇಬ್ಬರಿಗೂ ಸಮನ್ಸ್ ನೀಡಿದ್ದರು. ಆದರೆ, ಮಹೇಶ್ ಪೊಲೀಸರ ಎದುರು ಹಾಜರಾಗಿರಲಿಲ್ಲ. ಹೀಗಿರುವಾಗ ಸೆ. 28ರಂದು ಕ್ಲೀನಿಕ್ನಲ್ಲಿ ಸೋನಾ ತಂದೆ ಜೋಸ್ ಸಮ್ಮುಖದಲ್ಲಿ ಸಂಧಾನ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಹೇಶ್, ಸೋನಾರನ್ನು ಬಲವಂತವಾಗಿ ಕ್ಲಿನಿಕ್ನ ಲ್ಯಾಬ್ ಒಳಗಡೆ ಎಳೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆಯ ಹೊಟ್ಟೆಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಶರಣಾಗಲು ಪೊಲೀಸ್ ಠಾಣೆಗೆ ಹೋಗುತ್ತೇನೆಂದು ಹೇಳಿ ಮಹೇಶ್ ಪರಾರಿಯಾಗಿದ್ದಾನೆ.
ಇನ್ನು ಸೋನಾಗೆ ಮೊದಲೇ ಮದುವೆಯಾಗಿ ಪತಿಯಿಂದ ಬೇರೆಯಾಗಿದ್ದಳು. ಒಂದು ಮಗುವೂ ಸಹ ಇದೆ. ಇನ್ನು ಪ್ರಿಯಕರ ಮಹೇಶ್ ಅವಿವಾಹಿತನಾಗಿದ್ದು, ಪವರಟ್ಟಿ ಮೂಲದವನು. ಸದ್ಯ ಸೋನಾ ಜೀವನ ದುರಂತ ಅಂತ್ಯ ಕಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ತವರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. (ಏಜೆನ್ಸೀಸ್)
ಕಾಲುವೆಯಲ್ಲಿ ನೀರು ಕುಡಿಯಲು ಹೋದ ಯುವಕರಿಬ್ಬರಿಗೆ ಕಾದಿತ್ತು ಬಿಗ್ ಶಾಕ್..!