ತರೀಕೆರೆ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಮಾದಿಗ ಸಮಾಜದ ಪದಾಧಿಕಾರಿಗಳು ಮಂಗಳವಾರ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿ.ಎಸ್.ರಾಜೀವ್ಗೆ ಮನವಿ ಸಲ್ಲಿಸಿದರು.
ರಾಜ್ಯ ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಡಿ.ಎನ್.ಸುನೀಲ್ ಮಾತನಾಡಿ, ಸೋಮವಾರ ಗೊಲ್ಲರಹಟ್ಟಿ ಗ್ರಾಮದಲ್ಲಿ ಜೆಸಿಬಿ ಕೆಲಸಕ್ಕೆ ಹೋಗಿದ್ದ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ದಲಿತ ಯುವಕನ ಮೇಲೆ ಸುಮಾರು 30 ಜನ ಸವರ್ಣೀಯರ ಗುಂಪು ಏಕಾಎಕಿ ಹಲ್ಲೆಗೆ ಮುಂದಾಗುವ ಜತೆಗೆ ಜಾತಿ ನಿಂದನೇ ಮಾಡಿ ಅತನಿಂದ ಗ್ರಾಮ ದೇವತೆಗೆ ಮೈಲಿಗೆಯಾಗಿದ್ದು, 20 ಸಾವಿರ ರೂ. ದಂಡ ವಿಧಿಸಿ ಅಮಾನವೀಯತೆ ಮೆರೆದಿದ್ದಾರೆ ಎಂದು ದೂರಿದರು.
ತಾಲೂಕು ಆಡಳಿತ ತಕ್ಷಣವೇ ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ 1989ರ ಅನುಷ್ಟಾನ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲರನ್ನು ಬಂಧಿಸಿ ಯುವಕನಿಗೆ ಸೂಕ್ತ ರಕ್ಷಣೆ, ನ್ಯಾಯ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯ ಎಂ.ಕರಿಯಣ್ಣ, ರಾಜ್ಯ ಮಾದಿಗ ಸಮಾಜದ ಗೌರವಾಧ್ಯಕ್ಷ ಓಂಕಾರಪ್ಪ, ಸಂಘಟನಾ ಕಾರ್ಯದರ್ಶಿ ರಾಜು, ಕಡೂರು ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪ್ರಮೋದ್, ಪದಾಧಿಕಾರಿಗಳಾದ ಯತೀಶ್, ನಂಜುಂಡ, ಹನುಮಂತಪ್ಪ, ನಾಗರಾಜ್, ಗೋವಿಂದರಾಜು, ಹರೀಶ್, ಅಭಿ, ಪ್ರದೀಪ್, ಪ್ರಮುಖರಾದ ಕೆ.ನಾಗರಾಜ್, ಬಾಲರಾಜ್ ಮತ್ತಿತರರಿದ್ದರು.