ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಆರ್.ಆರ್.ನಗರ ನಿವಾಸಿ ಭದ್ರಿನಾಥ್ ಬೊಮ್ಮನಹಳ್ಳಿ ಬಂಧಿತ. ಮುನಿರತ್ನ ಅವರ ಬೆಂಬಲಿಗರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ‘ಫ್ಯಾಂಟಮ್’ ಟೀಸರ್ ಇಲ್ಲ … ಯಾಕೆ?
ಆಗಿದ್ದೇನು?: ಕರೊನಾ ಸೋಂಕಿಗೆ ಒಳಗಾಗಿದ್ದ ಮುನಿರತ್ನ, ‘ನನಗೆ 57 ವಯಸ್ಸಾಗಿದ್ದು, ಕರೊನಾ ಸೋಂಕು ದೃಢಪಟ್ಟಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ. ಇಲ್ಲದಿದ್ದರೆ ಕ್ಷಮಿಸಿಬಿಡಿ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಫೇಸ್ಬುಕ್ನಲ್ಲಿ ಹಾಕಿದ್ದ ಭದ್ರಿನಾಥ್ ಎಂಬಾತ, ‘ಸೂಕ್ತವಾಗಿ ಚುನಾವಣೆ ಎದುರಿಸಲಾಗದವರಿಗೆ, ಕರೊನಾ ಒಂದು ನೆಪವಷ್ಟೇ. ಸೋಂಕಿತ ವ್ಯಕ್ತಿ ದೊಡ್ಡ ಭ್ರಷ್ಟಾಚಾರಿ. ಸೋಂಕಿತ ಆಸ್ಪತ್ರೆಯಿಂದ ವಾಪಸ್ ಬರುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.
ಇದನ್ನೂ ಓದಿ: ಯುಎನ್ಎಸ್ಸಿಯಲ್ಲಿ ಜಮ್ಮು-ಕಾಶ್ಮೀರದ ವಿಚಾರ ಔಟ್ಡೇಟ್
ಈ ಹಿನ್ನೆಲೆಯಲ್ಲಿ ಮುನಿರತ್ನ ಬೆಂಬಲಿಗರೊಬ್ಬರು ದೂರು ನೀಡಿದ್ದರು. ಈ ಸಂಬಂಧ ಬಂಧಿಸಿ, ಠಾಣಾ ಜಾಮೀನಿನ ಮೇಲೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಕಿರಣ್ ಎಂಬಾತ ಕೂಡ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.