ಹೊನ್ನಾವರ: ನೀರು ಕುಡಿಯಲು ಕಾಡಿನಿಂದ ನಾಡಿಗೆ ಬಂದ ಗಂಡು ಜಿಂಕೆ ಮರಿ ಬೀದಿ ನಾಯಿಗಳು ದಾಳಿಗೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚಂದಾವರ ಅರಣ್ಯ ಪ್ರದೇಶದಲ್ಲಿ ಗುರುವಾರ ನಡೆದಿದೆ. ಚಂದಾವರದ ತೇಬ್ರಿ ಹಳ್ಳಕ್ಕೆ ಗಂಡು ಜಿಂಕೆ ನೀರು ಕುಡಿಯಲು ಬಂದಿತ್ತು. ಈ ವೇಳೆ ಅಲ್ಲಿಯ ಬೀದಿ ನಾಯಿಗಳ ಗುಂಪು ಹಠಾತ್ ದಾಳಿ ನಡೆಸಿದೆ. ಜಿಂಕೆಯ ಹಿಂಗಾಲು ಮತ್ತು ಕುತ್ತಿಗೆ ಭಾಗಕ್ಕೆ ಬಲವಾದ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ಇದರಿಂದ ತಪ್ಪಿಸಿಕೊಂಡು ಓಡಿಹೋಗಲಾಗದೆ ಚಡಪಡಿಸಿ ಸ್ಥಳದಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ. ಚಂದಾವರ ಡಿಆರ್ಎಫ್ಒ ಎಸ್.ಐ. ನಾಯ್ಕ, ಅರಣ್ಯ ರಕ್ಷಕರಾದ ನರಸಿಂಹ ಪಟಗಾರ, ರಾಘವೇಂದ್ರ ನಾಯ್ಕ, ಅರಣ್ಯ ವೀಕ್ಷಕ ಸರೇಶ ಭಂಡಾರಿ, ವಾಹನ ಚಾಲಕ ಮಂಜುನಾಥ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಜಿಂಕೆ ಮರಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.