ಹುಬ್ಬಳ್ಳಿ: ಎಸ್ಎಸ್ಎಸ್ ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ಗುರುವಾರ ಭಾರತ ರತ್ನ ಪಂ. ಭೀಮಸೇನ್ ಜೋಶಿ ಅವರ ಜನ್ಮ ಶತಮಾನೋತ್ಸವ ಆಚರಿಸಲಾಯಿತು.
ನಿಲ್ದಾಣ ಬಳಿಯ ಸುರಸಂಗಮ ಉದ್ಯಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದುಸ್ತಾನಿ ಶಾಸ್ತ್ರೀಯ ದಿಗ್ಗಜರಾದ ಭಾರತ ರತ್ನ ಪಂ. ಭೀಮಸೇನ್ ಜೋಶಿ, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್, ಪಂ. ಕುಮಾರ ಗಂಧರ್ವ, ಪಂ. ಮಲ್ಲಿಕಾರ್ಜುನ ಮನಸೂರ ಮತ್ತು ಪಂ. ಸವಾಯಿ ಗಂಧರ್ವರ ಪುತ್ಥಳಿಗಳಿಗೆ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಪಂ. ಕೈವಲ್ಯ ಕುಮಾರ ಹಾಗೂ ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂ. ಕೈವಲ್ಯ ಕುಮಾರ, ಹುಬ್ಬಳ್ಳಿ-ಧಾರವಾಡ ಪ್ರವೇಶಿಸುವ ಮಾರ್ಗಗಳಲ್ಲಿ ‘ಸಂಗೀತ ಕಾಶಿ ನಗರ’ ಎಂಬ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿದರು. ಪಂ. ಭೀಮಸೇನ್ ಜೋಶಿ ಅವರೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ ಅವರು, ನಾನು ಚಿಕ್ಕವನಿದ್ದಾಗಲೇ ಪಂ. ಭೀಮಸೇನ್ ಜೋಶಿಯವರು ನನ್ನ ಬೆನ್ನು ತಟ್ಟಿ ಹಾಡಲು ಪ್ರೋತ್ಸಾಹಿಸಿದ್ದರು ಎಂದರು.
ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಮಾತನಾಡಿ, ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ನಿಲ್ದಾಣ ಹಾಗೂ ಸುತ್ತಲಿನ ಪರಿಸರವನ್ನು ಸೌಂದಯೀಕರಣಗೊಳಿಸಲಾಗುತ್ತಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ, ಚರಕ ಸ್ಥಾಪಿಸಲಾಗಿದ್ದು, ಒಳ ಭಾಗದಲ್ಲಿ ಕುಂಡಿಲಿನಿ ಚಕ್ರ, ಕೈಮುಗಿದು ಸ್ವಾಗತ ಕೋರುವ ಚಿತ್ರ ಹಾಗೂ ಪ್ಲಾಟ್ಫಾಮರ್್ನ ಬೆಂಚ್ನಲ್ಲಿ ಪತ್ನಿಯೊಂದಿಗೆ ಕುಳಿತ ಹಿರಿಯ ನಾಗರಿಕರನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ 3ನೇ ಪ್ರವೇಶ ದ್ವಾರ ಮಾರ್ಚ್ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದರು.
ಸಂಗೀತಗಾರ ಪಂ. ಶ್ರೀಧರ ಮಾಂಡ್ರೆ, ರೈಲ್ವೆ ಅಧಿಕಾರಿಗಳಾದ ವಿಶ್ವಾಸಕುಮಾರ, ಇಮ್ತಿಯಾಜ್ ಅಹ್ಮದ್, ಪಿ. ಮಹೇಂದ್ರ, ನೈಋತ್ಯ ರೈಲ್ವೆ ಕನ್ನಡ ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ ಹಾಗೂ ಇತರರಿದ್ದರು.