More

    ಜೂನ್‌ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ

    ಬೆಂಗಳೂರು: ಉನ್ನತ ಶಿಕ್ಷಣದ ಪರೀಕ್ಷೆ ಕುರಿತಂತೆ ಜೂನ್‌ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಆನ್‌ಲೈನ್‌/ಆಫ್‌ಲೈನ್‌ ತರಗತಿ ಮೂಲಕ ಅಭ್ಯಾಸ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

    ಕೊರೊನಾ ಕುರಿತ ಕರ್ನಾಟಕ ಸರ್ಕಾರದ ಉಪಕ್ರಮಗಳ ಕುರಿತು ‘ಸಮರ್ಥ ಭಾರತ’ ಫೇಸ್‌ಬುಕ್‌ ಪೇಜ್‌ನ ಲೈವ್‌ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡ ಅವರು ಈ ವಿಷಯ ಪ್ರಕಟಿಸಿದರು. ಅಲ್ಲದೇ, ಲಾಕ್‌ಡೌನ್‌, ಸಾಮಾಜಿಕ ಜಾಗೃತಿ, ಶಿಕ್ಷಣ, ಜೀವನೋಪಾಯ ಮುಂತಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ, ಆರೋಗ್ಯ, ಪೊಲೀಸ್‌, ಬ್ಯಾಂಕಿಂಗ್‌, ಶಿಕ್ಷಣ, ಐಟಿ-ಬಿಟಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಉನ್ನತ ಶಿಕ್ಷಣ ಕೋರ್ಸ್‌ಗಳ ಕುರಿತು ಮಾತನಾಡಿದ ಅವರು, “ಈ ಪರೀಕ್ಷೆಗಳು ಯಾವಾಗ, ಹೇಗೆ ನಡೆಸಬೇಕು ಎಂಬ ವಿಚಾರವಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಐದು ಬಾರಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುವುದು ಬೇಡ. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿ, ಪಠ್ಯಕ್ರಮದ ಅಭ್ಯಾಸ ಮಾಡಿ. ನೆಟ್‌ವರ್ಕ್‌ ಸಮಸ್ಯೆ ಇರುವವರು ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿ ವೀಕ್ಷಿಸಿ. ಕಾಲೇಜಿಗೆ ಹೋಗುವ ಬದಲು ಇರುವ ಸ್ಥಳದಿಂದಲೇ ಅಭ್ಯಾಸ ಮಾಡಿ ಜ್ಞಾನರ್ಜನೆಗೆ ಮೊದಲ ಆದ್ಯತೆ ಕೊಟ್ಟಾಗ ಪರೀಕ್ಷೆ ಎದುರಿಸುವುದು ಕಷ್ಟವಾಗದು. ಜೂನ್‌ ಮೊದಲ ವಾರದಲ್ಲಿ ಪರೀಕ್ಷೆ ಪೂರ್ಣ ವಿವರನ್ನು ನೇರವಾಗಿ ಹಂಚಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಹಿತ ಕಾಯುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ವಹಿಸಲಾಗುವುದು,”ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

    ದನ್ನೂ ಓದಿ: ಶಾಲೆಗಳನ್ನು ತೆರೆಯಲು ತರಾತುರಿ ಇಲ್ಲ: ಸುರೇಶ್‌ಕುಮಾರ್

    ಆನ್‌ಲೈನ್‌ ಶಿಕ್ಷಣಕ್ಕೆ ಆದ್ಯತೆ
    “ಪರೀಕ್ಷೆ ಸಮಯದಲ್ಲೇ ಕೊರೊನಾ ಸಂಕಷ್ಟ ಎದುರಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ಪೂರಕ ಕ್ರಮ ಜರುಗಿಸಲಾಗಿದೆ. ಎಲ್ಲ ಪಾಠ ಪ್ರವಚನಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ ಚಾನಲ್‌ಗಳಾದ ‘ವಿಜಯೀ ಭವ’, ‘ಜ್ಞಾನ ನಿಧಿ’ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ‘ಸ್ವಯಂ’ ಎಂಬ ಆನ್‌ಲೈನ್ ವೇದಿಕೆ ಮೂಲಕ ಯುಜಿಸಿ ಪಾಠ ಮಾಡಿದೆ, ಕರ್ನಾಟಕ ಮುಕ್ತ ವಿವಿಯಿಂದಲೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಕಾಲೇಜಿನಿಂದಲೇ ಪ್ರಾಧ್ಯಾಪಕರು ಆನ್‌ಲೈನ್‌ ತರಗತಿ ಜತೆಗೆ, ಪ್ರಾಯೋಗಿಕ ತರಗತಿ, ಪ್ರಾಜೆಕ್ಟ್‌ ವರ್ಕ್‌ ಮಾಡಲು ನೆರವಾಗುತ್ತಿದ್ದಾರೆ. ನೀಟ್‌ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿಯೇ ‘ಗೆಟ್‌ಸೆಟ್‌ ಗೊ’ ಆನ್‌ಲೈನ್‌ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. 2 ಹಾಗೂ 3ನೇ ವರ್ಷದ ಪದವಿ ತರಗತಿಗಳು ಆಗಸ್ಟ್‌ನಲ್ಲಿ ತರಗತಿಗಳು ಆರಂಭವಾಗಲಿದೆ. ಸೆಪ್ಟೆಂಬರ್‌ನಿಂದ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಲಿದೆ. ,”ಎಂದು ವಿವರಿಸಿದರು.

    ಇದನ್ನೂ ಓದಿ: ಹೈಕೋರ್ಟ್​ಗೆ ಪ್ರಿಯಾಂಕ್ ಖರ್ಗೆ ರಿಟ್

    ಐಟಿ-ಬಿಟಿ ನೆರವು
    “ಲಾಕ್‌ಡೌನ್‌ ಅವಧಿಯಲ್ಲಿ ಆರೋಗ್ಯ, ಆಹಾರ, ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಎಲ್ಲ ವಿಚಾರದಲ್ಲೂ ತಂತ್ರಜ್ಞಾನದ ಬಳಕೆ ಆಗಿದೆ. ಆನ್‌ಲೈನ್ ಮೂಲಕ ಎಲ್ಲವೂ ಮನೆ ಬಾಗಿಲಿಗೆ ತಲುಪಿಸಿದ್ದು ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ಇಲಾಖೆ ಎಲ್ಲ ವಿಷಯಗಳ ಬಗ್ಗೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ನಿಭಾಯಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ವರ್ಕ್‌ಫ್ರಮ್‌ ಹೋಮ್‌’ ಸಂಸ್ಕೃತಿ ಎಲ್ಲರಿಗೂ ಆಪ್ತವಾಗಿದೆ. ಯಾವುದೇ ಕೆಲಸ ಕಾರ್ಯಗಳು ಸ್ಥಗತಿಗೊಳ್ಳದೇ ನಿರಾತಂಕವಾಗಿ ಮುಂದುವರಿಸಲು ತಂತ್ರಜ್ಞಾನ ನೆರವಾಗಿದೆ,”ಎಂದರು.
    “ಅದೇ ರೀತಿ, ರಾಜ್ಯ ಜೈವಿಕ ತಂತ್ರಜ್ಞಾನ ಇಲಾಖೆಯ ಮಾರ್ಗದರ್ಶನದಲ್ಲಿ ಹಲವಾರು ಸಂಸ್ಥೆಗಳು ಕೊವಿಡ್ ಸೋಂಕಿಗೆ ಔಷಧ ಕಂಡುಹಿಡಿಯುವ‌‌‌ ಮತ್ತು ತ್ವರಿತವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡುವ ತಂತ್ರಜ್ಞಾನ ಆವಿಷ್ಕಾರದಲ್ಲಿ ತೊಡಗಿವೆ. ಟೆಸ್ಟಿಂಗ್ ಕಿಟ್‌, ಪಿಪಿಇ ಕಿಟ್‌, ವೆಂಟಿಲೇಟರ್‌ ಮುಂತಾದ ಪರಿಕರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧ್ಯವಾಗಿದೆ,”ಎಂದು ಹೇಳಿದರು

    ಕೌಶಲ ಅಭಿವೃದ್ಧಿ, ಉದ್ಯೋಗ
    “ಕೌಶಲ ಅಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವಜನರು ಉದ್ಯೋಗಾವಕಾಶ ಪಡೆಯಲು ಅಗತ್ಯ ತರಬೇತಿ ನೀಡಲು ಸಜ್ಜಾಗಿದೆ. ಎಲ್ಲಿ ಉದ್ಯೋಗ ಅವಕಾಶ ಇದೆ ಎಂದು ತಿಳಿದುಕೊಳ್ಳಲು ಪೋರ್ಟಲ್‌ ವ್ಯವಸ್ಥೆ ಇದೆ. ಉನ್ನತ ಶಿಕ್ಷಣದಲ್ಲಿ ಅಪ್ರೆಂಟಿಸ್‌ಶಿಪ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಬೇರೆ ದೇಶಗಳಿಂದ ವಾಪಸಾಗುವವರಿಗೂ ಕೌಶಲ ತರಬೇತಿ ನೀಡಲಾಗುವುದು. ಇಂಥ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ನಮ್ಮ ಅಧಿಕಾರಿಗಳು ಸಜ್ಜಾಗಿದ್ದಾರೆ. ನಮ್ಮ ಗ್ರಾಮೀಣ ಸ್ವಸಹಾಯ ಸಂಸ್ಥೆಗಳಿಂದ 25 ಲಕ್ಷ ಮಾಸ್ಕ್ ತಯಾರಿಸಲಾಗಿದೆ. ಜತೆಗೆ, ಪಿಪಿಇ ಕಿಟ್‌ ತಯಾರಾಗುತ್ತಿರುವುದು ಹೆಮ್ಮಯ ವಿಷಯ,”ಎಂದು ತಿಳಿಸಿದರು.

    ಇದನ್ನೂ ಓದಿ:  ಶಾಲೆಗಳನ್ನು ತೆರೆಯಲು ತರಾತುರಿ ಇಲ್ಲ: ಸುರೇಶ್‌ಕುಮಾರ್

    ಆರೋಗ್ಯಕ್ಕೆ ಒತ್ತು
    “ಸೀಮಿತ ಸೌಕರ್ಯ, ಸಂಪನ್ಮೂಲದಲ್ಲಿ ಕೊರೊನಾ ಪರಿಸ್ಥಿತಿ ಎದುರಿಸಲು ಸಾಕಷ್ಟು ಸವಾಲುಗಳು ಇದ್ದವು. ಜನರ ಜೀವ ಉಳಿಸುವದೇ ಮುಖ್ಯ ಉದ್ದೇಶವಾದ ಕಾರಣ, ಆಗ ಕಂಡುಕೊಂಡ ಮೊದಲ ಪರಿಹಾರ ಲಾಕ್‌ ಡೌನ್‌, ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಇದಕ್ಕೆ ಜನರ ಸಹಕಾರವೂ ದೊರೆತಿದೆ. ಅಗತ್ಯ ವಸ್ತುಗಳ ಸರಬರಾಜು, ಉತ್ಪಾದನೆ, ಸಾಗಣೆ, ಕಾನೂನು ಸುವ್ಯವಸ್ಥೆ ಪಾಲನೆ ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ. ಟೆಸ್ಟಿಂಗ್‌ ಲ್ಯಾಬ್‌ಗಳ ಸಂಖ್ಯೆ 2ರಿಂದ 35ಕ್ಕೆ ಏರಿದೆ. ತಿಂಗಳ ಕೊನೆಗೆ 60 ಲ್ಯಾಬ್‌ಗಳು ಅಸ್ತಿತ್ವಕ್ಕೆ ಬರಲಿದೆ. 100 ಟೆಸ್ಟ್‌ ಬದಲಿಗೆ ಈಗ 6000 ಟೆಸ್ಟ್‌ ಮಾಡುವ ಸಾಮರ್ಥ್ಯ ಹೆಚ್ಚಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಚಿಕಿತ್ಸೆ, ಪರೀಕ್ಷೆ, ಕ್ವಾರಂಟೈನ್‌, ಟ್ರೇಸಿಂಗ್‌ ವ್ಯವಸ್ಥೆ ಇದೆ. ಪ್ಲಾಸ್ಮಾ ಸೇರಿದಂತೆ ಹಲವು ಥೆರಪಿ, ಲಸಿಕೆ, ಔಷಧದ ಅನ್ವೇಷಣೆ ನಡೆಯುತ್ತಿದೆ. ಆರೋಗ್ಯ ಸೇತು, ಆಪ್ತಮಿತ್ರ ಮುಂತಾದ ಆ್ಯಪ್‌ ಮೂಲಕ ಮಾಹಿತಿ, ನೆರವು ಒದಗಿಸಲಾಗುತ್ತಿದೆ. ಟೆಲಿಮೆಡಿಸನ್‌ ಮೂಲಕ ನಿತ್ಯ 50 ಸಾವಿರ ಕರೆ ಸ್ವೀಕರಿಸಲಾಗುತ್ತಿದೆ. ಸಾಂಕ್ರಮಿಕ ರೋಗದ ತಡೆಗೆ, ಪ್ರತ್ಯೇಕ ಕೊವಿಡ್‌ ಆಸ್ಪತ್ರೆ ತೆರಯಲಾಗಿದೆ. ರಾಮನಗರ ಜಿಲ್ಲೆಯ ಜನರ ಆರೋಗ್ಯ ಸಮೀಕ್ಷೆ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್‌ ವೇದಿಕೆಯಲ್ಲಿ ದಾಖಲಿಸಲಾಗಿದೆ. ಕೊವಿಡ್‌19 ವಾರ್‌ ರೂಂ ಸ್ಥಾಪಿಸಿರುವ ಜತೆಗೆ ರಾಮನಗರದ ಕೊವಿಡ್‌ 19 ಆಸ್ಪತ್ರೆಯಲ್ಲಿ 24 ತಾಸು ಕಾರ್ಯನಿರ್ವಹಿಸುವ 16 ಹಾಸಿಗೆಯ ಟೆಲಿ ಐಸಿಯೂ ವ್ಯವಸ್ಥೆ ಆರಂಭಿಸಲಾಗಿದೆ,”ಎಂದು ವಿವರಿಸಿದರು.

    ಇದನ್ನೂ ಓದಿ: ಕ್ವಾರಂಟೈನ್​ ಕೇಂದ್ರಗಳಾಗಿ ಬದಲಾದ ಶಾಲೆಗಳು

    ಕೇಂದ್ರ-ರಾಜ್ಯದ ಪ್ಯಾಕೇಜ್‌, ಕ್ರಮಗಳು
    “ಕೊವಿಡ್‌ ವಿರುದ್ಧದ ಹೋರಾಟಕ್ಕೆ ‘ಆತ್ಮ ನಿರ್ಭರ ಭಾರತ’ ಅಭಿಯಾನಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಪ್ರಧಾನಿ ಮಾರ್ಗದರ್ಶನದಲ್ಲಿ ಜನಪರ ಕಾರ್ಯಗಳು ನಡೆಯುತ್ತಿವೆ. ಜನಧನ್‌ ಖಾತೆಗೆ ಹಣ, ಪಡಿತರ, ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ವಲಸೆ ಕಾರ್ಮಿಕರ ಹಿತರಕ್ಷಣೆ, ಅವರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ.
    ಇನ್ನು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು 2,272 ಕೋಟಿ ರೂ ಮೊತ್ತದ ಘೋಷಿಸಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಮಸ್ಯೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಅಗತ್ಯ ನೆರವು ಒದಗಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ದಿಮೆ ಸ್ಥಾಪನೆಗೆ ಇದ್ದ ಕಾನೂನು ತೊಡಕುಗಳನ್ನು ಬಗೆಹರಿಸಲಾಗಿದ್ದು, ಮುಖ್ಯವಾಗಿ ಭೂ ಸ್ವಾಧೀನ ಕಾನೂನಿನಲ್ಲಿ ಸುಧಾರಣೆ ತರಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮೂಲಕ ಆರೋಗ್ಯ ನಿಯಮ ಪಾಲಿಸದವರ ವಿರುದ್ಧ ಕ್ರಮದ ಜತೆಗೆ, ಆರೋಗ್ಯ ಸಿಬ್ಬಂದಿಗೆ ರಕ್ಷಣೆ ಒದಗಿಸಲಾಗಿದೆ,”ಎಂದರು.

    ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್​ಗೆ ಗ್ರೀನ್​ ಸಿಗ್ನಲ್​: ಶಿಫ್ಟ್​ ವ್ಯವಸ್ಥೆಗೆ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts