ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮೀಯರ ಪವಿತ್ರ ಬೆಳಕಿನ ಹಬ್ಬ ದೀಪಾವಳಿಗೆ ಶುಕ್ರವಾರ ಮುನ್ನುಡಿ ಸಿಕ್ಕಿದೆ. ಇಂದು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಹಬ್ಬ ಧನ್ತೇರಸ್ ಆಚರಿಸಲಾಗುತ್ತಿದ್ದು, ಉತ್ತರ ಭಾರತೀಯರಲ್ಲಿ ಇದು ಹೆಚ್ಚಾಗಿ ಆಚರಣೆಯಲ್ಲಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೊರಿದ್ದು, ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಹೆಚ್ಚು ಒತ್ತು ಕೊಡುವಂತೆ ಕರೆ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರ ಪೋಸ್ಟ್ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ನಾವು ಈ ದೀಪಾವಳಿಯನ್ನು 140 ಕೋಟಿ ಭಾರತೀಯರ ಪರಿಶ್ರಮದ ಹಬ್ಬವನ್ನಾಗಿ ಆಚರಿಸೋಣ. ಉದ್ಯಮಿಗಳ ಸೃಜನಶೀಲತೆ ಮತ್ತು ಪಟ್ಟುಬಿಡದ ಮನೋಭಾವದಿಂದಾಗಿ ಇಂದು ವೋಕಲ್ ಫಾರ್ ಲೋಕಲ್ ಅಭಿಯಾನದಡಿ ಈ ಹಬ್ಬವು ಈ ಹಬ್ಬವು ಆತ್ಮನಿರ್ಭರ ಭಾರತಕ್ಕೆ ನಾಂದಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ: ಸದಾನಂದಗೌಡ
ವೋಕಲ್ ಫಾರ್ ಲೋಕಲ್ ಮಂತ್ರ ಜಪಿಸಿದ ಪ್ರಧಾನಿ ಮೋದಿ
ಹಬ್ಬ-ಹರಿದಿನಗಳಲ್ಲಿ ನಮ್ಮ ಆದ್ಯತೆ ಏನಿದ್ದರೂ ದೇಶಿಯ ವಸ್ತುಗಳಿಗೆ ಮಾತ್ರ ಇರಬೇಕು ಎನ್ನುವ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ವೋಕಲ್ ಫಾರ್ ಲೋಕಲ್ ಮಂತ್ರವನ್ನು ಜಪಿಸಿದ್ದರು.
ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 106ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರಿಂದು (ಅ.29) ಮಾತನಾಡಿದರು. ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಖಾದಿ ದಾಖಲೆ ಮಾರಾಟಕ್ಕೆ ಸಾಕ್ಷಿಯಾಯಿತು. ಖಾದಿ ಮಹೋತ್ಸವ ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಮುರಿದಿದೆ. ಗಾಂಧಿ ಜಯಂತಿಯಂದು ಖಾದಿ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ಹಬ್ಬ ಹರಿದಿನಗಳಲ್ಲಿ ‘ವೋಕಲ್ ಫಾರ್ ಲೋಕಲ್’ ಬಳಕೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಪ್ರತಿ ಬಾರಿಯಂತೆ, ಈ ಬಾರಿಯೂ, ನಮ್ಮ ಹಬ್ಬಗಳಲ್ಲಿ, ನಮ್ಮ ಆದ್ಯತೆಯು ಸ್ಥಳೀಯ ಅಥವಾ ದೇಶಿಯ ವಸ್ತುಗಳಿಗೆ ಇರಬೇಕು ಮತ್ತು ನಾವೆಲ್ಲರೂ ಒಟ್ಟಾಗಿ ಆ ಕನಸನ್ನು ನನಸಾಗಿಸಿಕೊಳ್ಳೋಣ, ನಮ್ಮ ಕನಸು ಆತ್ಮನಿರ್ಭರ ಭಾರತವಾಗಿದೆ. ಭಾರತವು ಇಂದು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದರು.