ದಾವಣಗೆರೆ : ಕಾಂತರಾಜ್ ಆಯೋಗದ ಜಾತಿ ಗಣತಿ ವರದಿ ಜಾರಿಗೆ ಮತ್ತು ಮುಸ್ಲಿಂಮರ 2 ಬಿ ಮೀಸಲಾತಿಯನ್ನು ಶೇ.8ರಷ್ಟು ಹೆಚ್ಚಳಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಬುಧವಾರ ಮಹಾನಗರ ಪಾಲಿಕೆ ಮುಂಭಾಗ ಧರಣಿ ನಡೆಸಿದರು.
ಸರ್ಕಾರ ಎಲ್ಲ ಸಮುದಾಯಗಳ ಜನಸಂಖ್ಯೆ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅರಿಯಬೇಕು. ಆಗ ಮಾತ್ರ ಯೋಜನೆಗಳ ಪಾಲು ಪಡೆಯಲು ಸಾಧ್ಯವಾಗಲಿದೆ ಎಂದು ಧರಣಿ ನಿರತರು ತಿಳಿಸಿದರು.
2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇಮಿಸಿದ್ದ ಕಾಂತರಾಜ ಆಯೋಗವು ವರದಿ ಸಿದ್ಧಪಡಿಸಿದರೂ ನಂತರ ಯಾವುದೇ ಸರ್ಕಾರಗಳು ಅಂಗೀಕರಿಸಲಿಲ್ಲ. ಬಿಹಾರ ಸರ್ಕಾರ 2 ವರ್ಷಗಳಲ್ಲಿ ಜಾತಿಗಣತಿ ಪೂರ್ಣಗೊಳಿಸಿ ಅಂಗೀಕರಿಸಿದ್ದು ಅದೇ ಮಾದರಿಯಲ್ಲಿ ಕಾಂತರಾಜ್ ಆಯೋಗದ ವರದಿ ತಕ್ಷಣ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರ 2ಬಿ ಮೂಲಕ ಮುಸ್ಲಿಮರಿಗೆ ಒದಗಿಸಿದ್ದ ಮೀಸಲಾತಿ ರದ್ದುಗೊಳಿಸುವ ವಿಚಾರ ನ್ಯಾಯಾಲಯದಲ್ಲಿದ್ದು ಸರ್ಕಾರ ಕೋರ್ಟ್ಗೆ ಸೂಕ್ತ ಆಫಿಡೆವಿಟ್ ಸಲ್ಲಿಸಿ ಅದನ್ನು ಹಿಂಪಡೆಯಬೇಕು ಮತ್ತು ಮುಸ್ಲಿಂಮರ ಜನಸಂಖ್ಯೆಗೆ ಅನುಗುಣವಾಗಿ 2ಬಿ ಮೀಸಲಾತಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿಉಲ್ಲಾ, ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್, ಮುಸ್ಲಿಂ ಒಕ್ಕೂಟದ ಸಂಚಾಲಕ ಟಿ ಅಜ್ಗರ್, ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಧರಣಿಯಲ್ಲಿ ಭಾಗವಹಿಸಿದ್ದರು.
—-