ದಾವಣಗೆರೆ: ಗುರುಪೂರ್ಣಿಮೆಯಂದು ಅರ್ಪಣಾ ಭಾವ, ಶ್ರದ್ಧಾಭಕ್ತಿಯಿಂದ ಗುರುವನ್ನು ಪೂಜಿಸುವವರಿಗೆ ಗುರುಕಾರುಣ್ಯ ಲಭಿಸಲಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ತಜ್ಞ ಡಾ.ರಾಘವೇಂದ್ರ ಗುರೂಜಿ ತಿಳಿಸಿದರು.
ದೇವರಾಜ್ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನ ಹಾಗೂ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಷಾಢ ಹುಣ್ಣಿಮೆ ದಿನದಂದು ಗುರುಶ್ರೇಷ್ಠರಿಗೆ ಕೃತಜ್ಞತೆ ಸಲ್ಲಿಸುವುದೇ ಗುರುಪೂರ್ಣಿಮೆಯ ವಿಶೇಷವಾಗಿದೆ. ನಮ್ಮಲ್ಲಿನ ಅಂಧಕಾರ ಹೋಗಲಾಡಿಸಿ ಹೊಸ ಬೆಳಕನ್ನು ಕೊಡುವ ಚೈತನ್ಯಶಕ್ತಿ ಗುರುವಿನಲ್ಲಿದೆ. ಸಂಕಲ್ಪದೊಂದಿಗೆ ಗುರುವಿನ ಪಾದ ಪೂಜೆ ಮಾಡಿ ನಮಸ್ಕರಿಸುವುದು ಈ ಆಚರಣೆಯಾಗಿದೆ ಎಂದು ವಿವರಿಸಿದರು.
ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಯೋಗಾಚಾರ್ಯ ಡಾ. ಬಿ.ಕೆ.ಎಸ್. ಅಯ್ಯಂಗಾರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಶಾಂತಿ ಮಂತ್ರದೊಂದಿಗೆ ಅಗ್ನಿಹೋತ್ರ ಯಜ್ಞ ಪೂಜೆಯನ್ನು ನೆರವೇರಿಸಿ ದ್ವಾದಶ ನಾಮಾವಳಿಗಳೊಂದಿಗೆ ಗುರುನಮನ ಸಲ್ಲಿಸಲಾಯಿತು. ವೇದಾವತಿ, ಪ್ರಶಾಂತ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.