ದಾವಣಗೆರೆ: ನಗರದ ರಾಮ್ ಆ್ಯಂಡ್ ಕೊ ವೃತ್ತದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ರಸ್ತೆಯಲ್ಲೇ ಫುಟ್ಪಾತ್ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ಮಾಡಲಾಗುವುದು ಎಂದು ಮೇಯರ್ ಬಿ.ಜಿ.ಅಜಯ್ಕುಮಾರ್ ಹೇಳಿದರು.
ಅಧಿಕಾರಿಗಳ ಜತೆಗೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಮೇಲೆಯೇ ಫುಟ್ಪಾತ್ ಏಕೆ ನಿರ್ಮಿಸಿದರೆಂಬುದು ಗೊತ್ತಿಲ್ಲ. ಅದನ್ನು ತೆರವುಗೊಳಿಸಿದರೆ ರಸ್ತೆ ಅಗಲವಾಗಿ ವಾಹನಗಳ ಓಡಾಟಕ್ಕೆ ಹೆಚ್ಚು ಅವಕಾಶವಾಗುತ್ತದೆ ಎಂದು ತಿಳಿಸಿದರು.
ಫುಟ್ಪಾತ್ಗಳಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಾಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಕಾಸಲ್ ಶ್ರೇಷ್ಠಿ ಪಾರ್ಕ್ ಬಳಿ, ನಿಜಲಿಂಗಪ್ಪ ಬಡಾವಣೆ, ಅರುಣ ಚಿತ್ರಮಂದಿರ ಬಳಿ ಇರುವವರಿಗೆ ಮೀನು ಮಾರುಕಟ್ಟೆ ಹತ್ತಿರ ಹೀಗೆ ನಗರದ ನಾಲ್ಕು ಕಡೆಗಳಲ್ಲಿ ಫುಡ್ಕೋರ್ಟ್ ಮಾಡುವ ಯೋಜನೆ ಇದೆ ಎಂದು ವಿವರಿಸಿದರು.
ರಾಮ್ ಆ್ಯಂಡ್ ಕೋ ಸರ್ಕಲ್ನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ರಸ್ತೆ ಅಗಲವಾಗಬೇಕು. ಅದಕ್ಕೆ ಅಲ್ಲಿರುವ ಮರಗಳನ್ನು ತೆರವುಗೊಳಿಸಲು ಪಾಲಿಕೆ ನಿರ್ಧರಿಸಿದೆ. ತೊಂದರೆಯಾಗುವ ಒಂದೆರಡು ಮರಗಳನ್ನಷ್ಟೇ ತೆಗೆಯಬೇಕಾಗುತ್ತದೆ ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಸ್ಮಾರ್ಟ್ಸಿಟಿ ಅಧಿಕಾರಿಗಳು ಇದ್ದರು.
ಮಾಸ್ಕ್ ಧರಿಸದಿದ್ದರೆ ದಂಡ: ಮಾಸ್ಕ್ ಧರಿಸದೇ ಇದ್ದರೆ ನಗರಗಳಲ್ಲಿ 1,000 ರೂ, ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ಸರ್ಕಾರದ ಸೂಚನೆ ಇದೆ. ಅದನ್ನು ಇಂದಿನಿಂದಲೇ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆಂದು ಎಸ್ಪಿ ಹನುಮಂತರಾಯ ತಿಳಿಸಿದರು. ಎಲ್ಲರೂ ಮಾಸ್ಕ್ ಧರಿಸಿ ಹೊರ ಬಂದರೆ ದಂಡ ಕಟ್ಟುವ ಸಂದರ್ಭ ಬರುವುದಿಲ್ಲ ಎಂದರು.
ಕಾರ್ಪೊರೇಟರ್ಗಳು, ಅಧಿಕಾರಿಗಳು ಯಾರೇ ಮಾಸ್ಕ್ ಧರಿಸದೇ ಇದ್ದರೂ ದಂಡ ವಿಧಿಸಬೇಕು. ಆಗ ಕರೊನಾ ನಿಯಂತ್ರಿಸಲು ಸಾಧ್ಯ ಎಂದು ಮೇಯರ್ ಅಜಯ್ಕುಮಾರ್ ಹೇಳಿದರು.