ಬೆಂಗಳೂರು: ಫೆಡೆಕ್ಸ್ ನೌಕರ ಮತ್ತು ಮುಂಬೈ ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ವಿದೇಶಕ್ಕೆ ಡ್ರಗ್ಸ್ ಪಾರ್ಸೆಲ್ ಮಾಡುತ್ತಿರುವದಾಗಿ ಬೆದರಿಸಿ 1.52 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಸೈಬರ್ ಕಳ್ಳರು, ಅಮಾಯಕರಿಗೆ ಬೆದರಿಸಲು ಸಿಮ್ ಕಾರ್ಡ್ ಬಳಸಿ ಕರೆ ಮಾಡುತ್ತಿಲ್ಲ. ಬದಲಿಗೆ
ಸ್ಕೈಪ್ ಆ್ಯಪ್ನಲ್ಲಿ ಸಂಭಾಷಣೆ ನಡೆಸುತ್ತಿದ್ದು, ಇದು ಪೊಲೀಸ್ ತನಿಖೆಗೆ ಸವಾಲಾಗಿದೆ.
ಮೈಕೋ ಲೇಔಟ್ ಎಲ್ ಆ್ಯಂಡ್ ಟಿ ಸೌತ್ ಸಿಟಿಯ ದೇಬಾಶಿಸ್ ದಾಸ್ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಠಾಣೆ ಪೊಲೀಸರು, ಅಪರಿಚಿತರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ.10ರಂದು ದಾಸ್ಗೆ ಕರೆ ಮಾಡಿದ ವ್ಯಕ್ತಿ, ಫೆಡೆಕ್ಸ್ ಕೋರಿಯರ್ ಕಂಪನಿ ನೌಕರ ಕಾರ್ತಿಕೇಯ ಎಂದು ಪರಿಚಯ ಮಾಡಿಕೊಂಡು ಮುಂಬೈ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ಆನಂತರ ನಿಮ್ಮ ಹೆಸರಿನಲ್ಲಿ ತೈವಾನ್ ದೇಶದ ಝಂಗ್ ಲೀನ್ ಎಂಬ ವ್ಯಕ್ತಿಗೆ ಪಾರ್ಸೆಲ್ ಬುಕ್ ಆಗಿದೆ. ಆ ಪಾರ್ಸೆಲ್ನಲ್ಲಿ 5 ಹಳೆಯ ಪಾರ್ಸ್ಪೋರ್ಟ್, 6 ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್, 950 ಗ್ರಾಂ ಎಂಡಿಎಂಎ ಡ್ರಗ್ಸ್ ಒಳಗೊಂಡಿದೆ. ಈ ಸಂಬಂಧ ಮುಂಬೈ ಎನ್ಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಮುಂಬೈನ ಅಂಧೇರಿ ಸೈಬರ್ ಕ್ರೈಂ ವಿಭಾಗಕ್ಕೆ ಈ ಕುರಿತು ಆನ್ಲೈನ್ನಲ್ಲಿ ದೂರು ದಾಖಲಿಸುವಂತೆ ಸಲಹೆ ಕೊಟ್ಟಿದ್ದ.
ವಂಚಕನ ಮಾತು ನಂಬಿದ ದೂರುದಾರ ದಾಸ್, ಆತ ಕೊಟ್ಟ ಆ್ಯಪ್ ಬಳಸಿ ವಿಡಿಯೋ ಕಾಲ್ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ‘ಪ್ರದೀಪ್ ಸಾವಂತ್..ಅಂಧೇರಿ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಎಂದು ಪರಿಚಯ ಮಾಡಿಕೊಂಡು ಐಡಿ ಕಾರ್ಡ್ ಸಹ ತೋರಿಸಿದ್ದ.
ಆನಂತರ ಸಹಾಯ ಮಾಡುವ ನೆಪದಲ್ಲಿ ದಾಸ್ ಕಡೆಯಿಂದ ಆಧಾರ್ ಕಾರ್ಡ್ ಮತ್ತು ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡಿದ್ದ. ಬಳಿಕ ನಿಮ್ಮ ಹೆಸರಿನಲ್ಲಿ ಇಸ್ಲಾಮ್ ಮಲ್ಲಿಕ್ ಎಂಬಾತ 3 ಬ್ಯಾಂಕ್ ಖಾತೆ ತೆರೆದು ಹವಾಲ ಹಣ ದಂಧೆ ನಡೆಸುತ್ತಿದ್ದಾನೆ. ಇದರಿಂದ ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಪ್ರಕರಣ ಸಹ ದಾಖಲಾಗಿದೆ. ಈ ಕೇಸಿನಿಂದ ನಿಮಗೆ ನಿರಪರಾಧಿ ಪ್ರಮಾಣ ಪತ್ರ ಕೊಡುತ್ತೆವೆ. ನಾವು ಹೇಳಿದಂತೆ ಕೇಳಬೇಕು. ನಿಮ್ಮ ಜತೆಗೆ ಸೈಬರ್ ಕ್ರೈಂ ವಿಭಾಗದ ಡಿಸಿಪಿ ಮಾತನಾಡುತ್ತಾರೆ ಎಂದು ಕರೆ ಸ್ಥಿಗಿತ ಮಾಡಿದ್ದ.
ಇದಾದ ಕೆಲವೊತ್ತಿಗೆ ಮತ್ತೊಬ್ಬ ವ್ಯಕ್ತಿ, ದಾಸ್ಗೆ ಕರೆ ಮಾಡಿ ಸೈಬರ್ ಕ್ರೈಂ ವಿಭಾಗ ಡಿಸಿಪಿ ಎಂದು ಪರಿಚಯ ಮಾಡಿಕೊಂಡು, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಮತ್ತು ಎ್ಡಿ ಇದ್ದರೂ ಅದನ್ನು ತಕ್ಷಣ ಡ್ರಾ ಮಾಡಿ ನಾವು ಹೇಳಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ.
ಆರ್ಬಿಐ ಮಾರ್ಗಸೂಚಿಯಂತೆ ಕೇಸ್ ಕ್ಲೀಯರ್ ಆದ ಅರ್ಧ ಗಂಟೆಯಲ್ಲಿ ವಾಪಸ್ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಸೂಚಿಸಿದ್ದ. ಪೊಲೀಸ್ ಅಧಿಕಾರಿ ಇರಬೇಕೆಂದು ವಂಚಕನ ಮಾತು ನಂಬಿದ ದಾಸ್, ಆತ ಕೊಟ್ಟ ಬ್ಯಾಂಕ್ ಖಾತೆಗೆ 1.52 ಕೋಟಿ ರೂ. ವರ್ಗಾವಣೆ ಮಾಡಿದ್ದ.
ಖಾತೆಗೆ ಹಣ ಜಮೆ ಆಗುತ್ತಿದಂತೆ ವಂಚಕರು ಎಲ್ಲ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ದಾಸ್, ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಕೈಪ್ ಆ್ಯಪ್ :
ಪೊಲೀಸರ ಬಲೆಗೆ ಸಿಗದಂತೆ ದಾರಿ ತಪ್ಪಿಸಲು ಸೈಬರ್ ಕಳ್ಳರು, ಸಿಮ್ ಕಾರ್ಡ್ ಬಳಸುತ್ತಿಲ್ಲ. ಬದಲಿಗೆ ಸ್ಕೈಪ್ ಆ್ಯಪ್ನಲ್ಲಿ ಅಮಾಯಕರ ಜತೆ ಸಂಭಾಷಣೆ ನಡೆಸುತ್ತಿದ್ದಾರೆ. ಸಿಮ್ ಬಳಸುತ್ತಿಲ್ಲ. ಇದರಿಂದ ಪೊಲೀಸ್ ತನಿಖೆಗೆ ಕಷ್ಟಸಾಧ್ಯವಾಗಿದೆ. 1.52 ಕೋಟಿ ರೂ. ಕೇಸಿನಲ್ಲಿ ಮೊದಲು ಕರೆ ಮಾಡಿದ ವ್ಯಕ್ತಿ, ದೂರುದಾರನಿಗೆ ಸ್ಕೈಪ್ ಆ್ಯಪ್ನಲ್ಲಿ ಕರೆ ಮಾಡುವಂತೆ ಸಲಹೆ ಕೊಟ್ಟಿದ್ದ. ಆದರಿಂದ ಜನರು ಅನುಮಾನ ಬಂದರೇ ಸ್ಥಳೀಯ ಪೊಲೀಸ್ ಅಥವಾ ನಮ್ಮ-112ಗೆ ಕರೆ ಮಾಡಿ ಸಹಾಯ ಪಡೆಯುವುದು ಒಳಿತು.