ಹುಬ್ಬಳ್ಳಿ: ವಿದೇಶಿ ಮೂಲದ ಕಂಪನಿಯೊಂದರ ವತಿಯಿಂದ ಔಷಧ ಖರೀದಿಸುವ ಆಮಿಷವೊಡ್ಡಿ ನವನಗರದ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಹು&ಧಾ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಹೊಸ್ಪಿಟೇಕ್ ಸೊಲ್ಯುಶನ್ಸ್ ಕಂಪನಿ ಮಾಲೀಕ ಮಹಾಂತಯ್ಯ ಶೀಗಿಹಳ್ಳಿಮಠ ಅವರನ್ನು, ಪೊಲಾರೀಸ್ ಮೆಡ್ ವರ್ಲ್ಡ್ ಕೆನಡಾ ಕಂಪನಿಯ ಸೂಜನ್ ಗ್ರಹಾಮನ್ ಎಂಬ ಅಪರಿಚಿತ ವ್ಯಕ್ತಿ ವಾಟ್ಸ್ ಆ್ಯಪ್ ಹಾಗೂ ಇ-ಮೇಲ್ ಮೂಲಕ ಜುಲೈನಲ್ಲಿ ಸಂಪಕಿರ್ಸಿದ್ದ. ನಮ್ಮ ಕಂಪನಿಗೆ 500 ಲೀ. “ನ್ಯೂಟ್ರಿಸಾಲ್ ರಾ ಎಕ್ಸಟ್ರಾಕ್ಟ್’ ಎಂಬ ಔಷಧದ ಅಗತ್ಯವಿದೆ. ಈ ಔಷಧ ಪುಣೆಯ ಮೆ.ಡಿ.ಕೆ.ಎಂಟರ್ಪೆಜ್ನಲ್ಲಿ ಮಾತ್ರ ಸಿಗುತ್ತದೆ. ಇದು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದೆ. ಅವರನ್ನು ನೀವು ಸಂಪಕಿರ್ಸಿ, ನಮಗೆ ಪೂರೈಸಿ ಎಂದು ತಿಳಿಸಿದ್ದರು.
ಇದನ್ನು ನಂಬಿದ ಮಹಾಂತಯ್ಯ 2 ಲೀ.ಸ್ಯಾಂಪಲ್ ಪಡೆಯುವ ಸಲುವಾಗಿ ಆರ್ಡರ್ ನೀಡಿ, ಮುಂಗಡವಾಗಿ 3,00,000 ರೂ. ಹಣ ವರ್ಗಾಯಿಸಿದ್ದರು. ಆದರೆ, ಅವರು ಔಷಧವನ್ನೂ ಕೊಡದೇ, ಹಣವನ್ನೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.