ಕಾರವಾರ: ಮಹಾ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕ್ರಿಪ್ಟೋ ಕರೆನ್ಸಿ ವ್ಯವಹಾರ, ಅವ್ಯವಹಾರ ಈಗ ಜಿಲ್ಲೆಯಲ್ಲೂ ವ್ಯಾಪಿಸಿದೆ. ಕ್ರಿಪ್ಟೋ ಕರೆನ್ಸಿ ಪಡೆದು ಹಣ ದ್ವಿಗುಣಗೊಳಿಸಿಕೊಳ್ಳುವ ಆಸೆಯಲ್ಲಿ ಜಿಲ್ಲೆಯ ವ್ಯಕ್ತಿಯೊಬ್ಬ ಮೋಸ ಹೋಗಿದ್ದು, ಈ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಹನುಮೇಶ ಹಿರೇಮನಿ, ಅಶೋಕ ಟಿ.ಕೆ., ಹಾಗೂ ಅನಿಲಕುಮಾರ ಎಂ. ಎಂಬುವವರ ವಿರುದ್ಧ ಶಿರಸಿ ಅಂಬಾಗಿರಿ ಸಮೀಪದ ಲೋಕೇಶ ಹ್ಯಾಪನವರ್ ದೂರು ನೀಡಿದ್ದಾರೆ.
ಲೋಕೇಶ ಅವರು ಕ್ರಿಪ್ಟೋ ಕರೆನ್ಸಿ ಕೊಳ್ಳಲು ತಮ್ಮ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಹಾಗೂ ಕೆನರಾ ಬ್ಯಾಂಕ್ ಆಪ್ ಮೂಲಕ 1 ಲಕ್ಷ ರೂ.ಗಳನ್ನು ಹನುಮೇಶ ಹಿರೇಮನಿ ಅವರ ಖಾತೆಗೆ ವರ್ಗಾಯಿಸಿದ್ದರು.
ಹೆಚ್ಚಿನ ಹಣ ಹೂಡಿದರೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ಹೇಳಿದ್ದರಿಂದ ಸಾಗರದ ತಮ್ಮ ಸ್ನೇಹಿತ ರಾಮು ಹೆಸರಿನಲ್ಲಿ ಆರ್ ಟಿಜಿಎಸ್ ಮೂಲಕ 35 ಲಕ್ಷ ರೂ.ಗಳನ್ನು ಅನಿಲಕುಮಾರ ಎಂ.ಎಂಬುವವರ ಖಾತೆಗೆ ಜಮಾ ಮಾಡಿದ್ದರು. ನಂತರ ಮತ್ತೆ 3 ಲಕ್ಷ ರೂ.ಗಳನ್ನು ಜಮಾ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.
ಒಟ್ಟಾರೆ 39 ಲಕ್ಷ ರೂ.ಗಳನ್ನು ಮೂವರು ಪಡೆದು, ಡಿಸೆಂಬರ್ 13ರ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಕ್ರಿಪ್ಟೋ ಕರೆನ್ಸಿಯೂ ಸಿಗದೇ ಅತ್ತ ಇದ್ದ ಹಣವನ್ನೂ ಕಳೆದುಕೊಂಡು ಲೋಕೇಶ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಇದನ್ನೂ ಓದಿ: ಸಹಸ್ರಲಿಂಗದಲ್ಲಿ ಐವರು ನೀರುಪಾಲು..?