ಅಮೃತಸರ: ಹಬ್ಬದ ಪ್ರಯುಕ್ತ ಪಂಜಾಬ್ನಿಂದ ಬಿಹಾರಕ್ಕೆ ಹೊರಡಬೇಕಿದ್ದ ವಿಶೇಷ ರೈಲೊಂದು ರದ್ದಾದ ಹಿನ್ನಲೆಯಲ್ಲಿ ಉದ್ರಿಕ್ತಗೊಂಡ ಪ್ರಯಾಣಿಕರು ರೈಲು ನಿಲ್ದಾಣವನ್ನು ಧ್ವಂಸಗೊಳಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸಿರ್ಹಿಂದ್ನಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ನಿಂದ ಬಿಹಾರದ ಸಹರ್ಸಾಗೆ ವಿಶೇಷ ರೈಲೊಂದು ಹೊರಡಬೇಕಿತ್ತು. ಆದರೆ, ರೈಲು ರದ್ದಾಗಿದೆ ಎಂಬ ವಿಚಾರ ಹೊರಬಂದ ಬಳಿಕ ಗದ್ದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ಅಧಿಕಾರ ಸ್ವೀಕರಿಸುವಾಗಲೇ ಕಾಂಗ್ರೆಸ್ ಕಚೇರಿಯಲ್ಲೂ ಪಕ್ಷ ಸೇರ್ಪಡೆ! ಕೈ ಹಿಡಿಯೋರ್ಯಾರು?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನುರಾರು ಮಂದಿ ರೈಲ್ವೆ ಹಳಿ ಮೇಲೆ ಜಮಾಯಿಸಿ ಇಲಾಖೆ ವಿರುದ್ಧ ಘೋಷನೆಗಳನ್ನು ಕೂಗಿ ಅಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲುಗಳ ಮೇಲೆ ಕಲ್ಲು ತೂರಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ಪೊಲೀಸರ ಮೇಲೂ ಉದ್ರಿಕ್ತರ ಗುಂಪು ಕಲ್ಲು ತೂರಿದ್ದು, ಅಧಿಕಾರಿಗಳು ಗಂಭಿರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಗುಜರಾತ್ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹೊರಟಿದ್ದ ವಿಶೇಷ ರೈಲೊಂದನ್ನು ಹತ್ತುವ ವೇಳೆ ಕಾಲ್ತುಳಿತ ಉಂಟಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾನುವಾರ ರೈಲು ಹತ್ತುವ ವೇಳೆ ಕಾಲ್ತುಳಿತ ಉಂಟಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.