ಚಿತ್ರದುರ್ಗ: ಮೊಳಕಾಲ್ಮ್ಮುರು ವಿಧಾನಸಭಾ ಕ್ಷೇತ್ರದ ಕರ್ನಾಟಕ-ಆಂಧ್ರಪ್ರದೇಶ ಗಡಿಭಾಗದ ಕಣಕುಪ್ಪೆ ಚೆಕ್ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಸಾಗಣೆ ಮಾಡುತ್ತಿದ್ದ 6.39 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಇತರೆ ಬೆಲೆಬಾಳುವ ಆಭರಣ ಮಂಗಳವಾರ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದ್ದಾರೆ.
ಬಳ್ಳಾರಿಯಿಂದ ಬೆಂಗಳೂರು ಕಡೆ ಸಾಗುತ್ತಿದ್ದ ವಾಹನ ಪರಿಶೀಲಿಸಿದಾಗ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಪ್ರತಿಷ್ಠಿತ ಜ್ಯುವೆಲರಿಗಳಿಗೆ ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಸಾಗಣೆದಾರರು ತಿಳಿಸಿದ್ದಾರೆ. ಆದರೆ, ಅದಕ್ಕೆ ಪೂರಕ ದಾಖಲೆ ಹಾಜರುಪಡಿಸಿಲ್ಲ. ಹೀಗಾಗಿ ಹೆಚ್ಚಿನ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಅಕ್ರಮಕ್ಕೆ ಹಣ, ಯಾವುದೇ ವಸ್ತು ಬಳಕೆ ಮಾಡಿದರು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಿವ್ಯಾಪ್ರಭು ಎಚ್ಚರಿಸಿದ್ದಾರೆ.
ಹಿರಿಯೂರಿನಲ್ಲಿ 4.4 ಲಕ್ಷ ರೂ. ನಗದು ವಶ
ಬೆಂಗಳೂರಿನಿಂದ ಹುಳಿಯಾರಿಗೆ ಸಾಗಿಸುತ್ತಿದ್ದ ದಾಖಲೆ ಇಲ್ಲದ 4.4 ಲಕ್ಷ ರೂ. ನಗದನ್ನು ಮಂಗಳವಾರ ಹಿರಿಯೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಪ್ರಾಥಮಿಕ ಹಂತದಲ್ಲಿ ಪ್ರಕರಣ ಪರಿಶೀಲಿಸಿದಾಗ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಬೆಂಗಳೂರು ಮೂಲದ ಇಬ್ಬರನ್ನು ವಿಚಾರಣೆ ಮಾಡಲಾಗುತ್ತಿದೆ. ವಶಪಡಿಸಿಕೊಂಡ ನಗದನ್ನು ಜಿಲ್ಲಾ ಚುನಾವಣಾ ಸಮಿತಿಗೆ ನೀಡಲಾಗಿದೆ.
ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ ಎಂದು ಎಸ್ಪಿ ಕೆ.ಪರುಶುರಾಮ ತಿಳಿಸಿದ್ದಾರೆ.