ನವದೆಹಲಿ : ಇತ್ತೀಚೆಗೆ ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 20 ಗ್ರಾಮಸ್ಥರಿಗೆ ಕರೊನಾ ಲಸಿಕೆ ನೀಡುವಾಗ ಎಡವಟ್ಟೊಂದು ನಡೆದಿದೆ. ಏಪ್ರಿಲ್ನಲ್ಲಿ ಮೊದಲನೇ ಡೋಸ್ನಲ್ಲಿ ಕೋವಿಶೀಲ್ಡ್ ತೆಗೆದುಕೊಂಡಿದ್ದವರಿಗೆ ಎರಡನೇ ಡೋಸ್ ಆಗಿ ಕೋವಾಕ್ಸಿನ್ಅನ್ನು ನೀಡಲಾಗಿದೆ. ಆದರೆ ಈ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ನ್ಯಾಷನಲ್ ಎಕ್ಸ್ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಷನ್ ಫಾರ್ ಕೋವಿಡ್19ನ ಅಧ್ಯಕ್ಷ ಡಾ. ವಿ.ಕೆ.ಪೌಲ್ ಅವರನ್ನು ಇಂದು ಸುದ್ದಿಗಾರರು ಪ್ರಶ್ನಿಸಿದಾಗ, ಯಾವುದೇ ಮಹತ್ವದ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆಗಳಿಲ್ಲ. ಆದಾಗ್ಯೂ ಹೆಚ್ಚಿನ ಪರಿಶೀಲನೆ ಮಾಡುವ ಅಗತ್ಯವಿದೆ ಎಂದಿದ್ದಾರೆ. “ಈ ಬಗ್ಗೆ ಪರಿಶೀಲಿಸಬೇಕು. ಹೆಚ್ಚಿನ ವೈಜ್ಞಾನಿಕ ತಿಳುವಳಿಕೆಗಾಗಿ ನಾವು ಕಾಯಬೇಕಾಗಿದೆ. ಆದರೆ ಎರಡು ಡೋಸ್ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ನೀಡಲಾಗಿದ್ದರೂ ಸಹ, ಕಳವಳ ಪಡಬೇಕಾಗಿಲ್ಲ” ಎಂದು ಹೇಳಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: 2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು
ಜಾಗತಿಕವಾಗಿ, ವಿವಿಧ ಲಸಿಕೆಗಳನ್ನು ಮಿಶ್ರಣ ಮಾಡಿ ನೀಡಿದರೆ ಅದರ ಪರಿಣಾಮಕಾರಿತ್ವ ಹೆಚ್ಚಬಹುದೇ ಎಂಬ ಸಂಶೋಧನೆಯನ್ನು ಕೆಲವು ವಿಜ್ಞಾನಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಒಂದು ಆಕಸ್ಮಿಕವಾಗಿದೆ. ಈ ರೀತಿ ಬೇರೆ ಬೇರೆ ಲಸಿಕೆ ಡೋಸ್ ಪಡೆದ ಜನರು ಆತಂಕಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಿದ್ಧಾರ್ಥನಗರ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಅವರು, “ಇದು ಖಂಡಿತವಾಗಿಯೂ ತಪ್ಪಾಗಿ ನಡೆದಿದೆ. ಲಸಿಕೆಗಳನ್ನು ಮಿಶ್ರಣ ಮಾಡಿ ನೀಡಲು ಯಾವುದೇ ಸರ್ಕಾರಿ ಸೂಚನೆಗಳಿಲ್ಲ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೇಳಿದ್ದೇನೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ. (ಏಜೆನ್ಸೀಸ್)
ಲಸಿಕೆ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ : ಸಿಬ್ಬಂದಿಗೆ ಅಧಿಕಾರಿಯ ಎಚ್ಚರಿಕೆ !
‘ಫ್ರೆಂಡ್ಸ್’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್ನಲ್ಲಿ ತಾರೆಗಳು !