ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ಕರೊನಾ ಸೋಂಕಿತೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಟ್ಲದ ಮಹಿಳೆ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಗೊಳಗಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ ಆಕೆ ಕರೆ ಮಾಡಿ ಸಂಬಂಧಿಕರ ಜತೆ ಮಾತನಾಡಿದ್ದರು. ಐಸಿಯು ವಾರ್ಡ್ನಿಂದ ಜನರಲ್ ವಾರ್ಡ್ಗೆ ಸ್ಥಳಾಂತರಿಸುತ್ತಾರೆ ಎಂದಿದ್ದರು. ಆದರೆ, ಸಂಜೆ ಮಹಿಳೆ ಮೃತಪಟ್ಟಿದ್ದಾರೆ. ವೈದ್ಯರು ಮನೆಯವರ ಗಮನಕ್ಕೆ ತಾರದೆ ಮಹಿಳೆಯನ್ನು ಜನರಲ್ ವಾರ್ಡ್ಗೆ ಸ್ಥಳಾಂತರಿಸಿದ್ದಾರೆ. ಅವರ ಸಾವಿಗೆ ವೆನ್ಲಾಕ್ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಪಾಂಡೇಶ್ವರ ಪೊಲೀಸರು, ಶಾಸಕ ವೇದವ್ಯಾಸ ಕಾಮತ್ ಆಸ್ಪತ್ರೆಗೆ ಆಗಮಿಸಿ ಮೃತ ಮಹಿಳೆಯ ಕುಟುಂಬಸ್ಥರು ಹಾಗೂ ವೈದ್ಯರ ಜತೆ ಮಾತುಕತೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಅನುಮಾನವಿದ್ದರೆ ಮನೆಮಂದಿ ದೂರು ನೀಡಬಹುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.