More

    ರಾಜ್ಯದಲ್ಲಿ ಕರೊನಾ ಆತಂಕ; ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

    ಬೆಂಗಳೂರು: ವರ್ಷಾಂತ್ಯದಲ್ಲಿ ಮಹಾಮಾರಿ ಕೋವಿಡ್​ ಮತ್ತೊಮ್ಮೆ ತನ್ನ ಆರ್ಭಟ ಶುರು ಮಾಡಿದ್ದು, ಇದರ ರೂಪಾಂತರ ತಳಿ JN.1 ವೈರಸ್​​ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಕೋವಿಡ್​ ಪಾಸಿಟಿವಿಟಿ ಪ್ರಮಾಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ರಾಜ್ಯದಲ್ಲಿ ಈಗಾಗಲೇ 400ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು,  60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ರೋಗಗಳಿಂದ ಬಳಲಲುತ್ತಿರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಸರ್ಕಾರದಿಂದ ಕೋವಿಡ್‌ ಮಾರ್ಗಸೂಚಿ ಹೊರಡಿಸಲಾಗಿದೆ.

    ಮಾರ್ಗಸೂಚಿಯಲ್ಲೇನಿದೆ?

    • ರಾಜ್ಯದಲ್ಲಿ ಪ್ರತಿದಿನ 5000 ಟೆಸ್ಟಿಂಗ್ ಗುರಿಯನ್ನು ಸಾಧಿಸಲಾಗುವುದು. ಕೋವಿಡ್ ಟೆಸ್ಟಿಂಗ್ ನಲ್ಲಿ ರಾಜ್ಯವು 2ನೇ ಸ್ಥಾನದಲ್ಲಿರುವುದರಿಂದ (ಕೇರಳ ರಾಜ್ಯವು ಮೊದಲನೇ ಸ್ಥಾನದಲ್ಲಿದೆ). ಪಾಸಿಟಿವ್ ಪ್ರಕರಣಗಳ ಸಂಪರ್ಕಿತರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
    • ರಾಜ್ಯದ 432 ಸೋಂಕಿತರ ಪೈಕಿ 400 ಪ್ರಕರಣಗಳು ಹೋಂ ಐಸೋಲೇಷನ್ ನಲ್ಲಿದ್ದು, ಉಳಿದ 32 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
    • ಹೋಂ ಐಸೋಲೇಷನ್​​ನಲ್ಲಿರುವ ಹಾಗೂ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿರುವವರನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ ನ ವೈದ್ಯರು ಹಾಗೂ ಸಿಬ್ಬಂದಿಯ ತಂಡವು ಭೇಟಿ ನೀಡಿ, ರೋಗ ಲಕ್ಷಣಗಳನ್ನು ಪರಿಶೀಲಿಸಿ ಮೇಲ್ವಿಚಾರಣೆ ನಡೆಸುವುದು. 
    • ಸಾಕಷ್ಟು ಸಂಖ್ಯೆಯ ಕೋವಿಡ್ ಪಾಸಿಟಿವ್ ಮಾದರಿಗಳನ್ನು (ಭಾರತ ಸರ್ಕಾರದ ಮಾರ್ಗಸೂಚಿಯಂತೆ) ಜೀನೋಮ್ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಕಳುಹಿಸುವುದು.
    • ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನವನ್ನು ನಡೆಸುವುದು. ಹಾಸಿಗೆಗಳು ಹಾಗೂ ವೆಂಟಿಲೇಟರ್ ನ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವುದು.       
    • ಅಂದಾಜು 30,000 ಮುನ್ನೆಚ್ಚರಿಕಾ ಡೋಸ್ಕಳ ಕೋವಿಡ್ 19 ಲಸಿಕೆಯನ್ನು, ವಿಶೇಷವಾಗಿ ವೃದ್ಧರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೀಡಲಾಗುವುದು.
    • ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ Flu ಲಸಿಕೆಯನ್ನು ನೀಡಲಾಗುವುದು.
    • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ H ಬ್ಲಾಕ್, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಬೆಂಗಳೂರು ಹಾಗೂ ಎಲ್ಲಾ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೋವಿಡ್ ಐಸೋಲೇಷನ್ ವಾರ್ಡ್ ಗಳನ್ನು ಸಿದ್ದಪಡಿಸಿ ಸನ್ನದ್ದವಾಗಿಡುವುದು.
    • ರಾಜ್ಯದಲ್ಲಿ ಕೋವಿಡ್ ನಿಂದ ವರದಿಯಾಗುತ್ತಿರುವ ಮರಣ ಪ್ರಕರಣಗಳನ್ನು ರಾಜ್ಯ ಮರಣ ಆಡಿಟ್ ಸಮಿತಿಯು ಅಧ್ಯಯನ ನಡೆಸಿ, ಅದರಂತೆ ಕೋವಿಡ್ ಪ್ರಕರಣಗಳ ಚಿಕಿತ್ಸೆಗೆ ಅಗತ್ಯ ಶಿಫಾರಸ್ಸುಗಳನ್ನು ನೀಡುವುದು.
    • ವಿಶೇಷವಾಗಿ ವೃದ್ಧರು ಹಾಗೂ ಪ್ರತಿರೋಧ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾರ್ವಜನಿಕರ ಓಡಾಟ/ ಪ್ರಯಾಣ/ಹೊಸ ವರ್ಷಾಚರಣೆಗೆ ಯಾವುದೇ ನಿರ್ಭಂದಗಳನ್ನು ವಿಧಿಸಿರುವುದಿಲ್ಲ. ರಾಜ್ಯದ ಗಡಿ ಭಾಗಗಳಲ್ಲಿ ಯಾವುದೇ ರೀತಿಯ ತಪಾಸಣೆ ಇರುವುದಿಲ್ಲ.
    • ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು, ಲಕ್ಷಣಗಳು ಉತ್ತಮವಾಗುವವರೆಗೂ ಪೋಷಕರು ಶಾಲೆಗೆ ಕಳುಹಿಸುವಂತಿಲ್ಲ. 
    • ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಕೋವಿಡ್ 19 ಪಾಸಿಟಿವ್ ಆದಲ್ಲಿ ಹೋಂ ಐಸೋಲೇಷನ್ ಗಾಗಿ 7 ದಿನಗಳ ರಜೆಯನ್ನು ಬಳಸಿಕೊಳ್ಳಲು ಅರ್ಹರಾಗಿರುತ್ತಾರೆ.
    • ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಆರ್‌ಎಟಿ, ಆರ್‌ಟಿಪಿಸಿಆರ್ ಹಾಗೂ ಸಂಬಂಧಪಟ್ಟ ಇತರ ಪರೀಕ್ಷೆಗಳ ದರವನ್ನು ನಿಗದಿಗೊಳಿಸಲು, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ 2 ದಿನಗಳ ಒಳಗೆ ವರದಿಯನ್ನು ಸಲ್ಲಿಸುವುದು.
    • ಕೋವಿಡ್ 19 ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆಯು ಕಡಿಮೆ ಇರುವ ಹಿನ್ನೆಲೆಯಲ್ಲಿ, ಚಿಕಿತ್ಸಾ ದರವನ್ನು ನಿಗದಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts