ಬಾಳೆಹೊನ್ನೂರು: ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಹಿರೇಮಠ್ ಪ್ರಕರಣ ಖಂಡಿಸಿ ಜೇಸಿಐ ವೃತ್ತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಈ ಹಿಂದೆ ಭಾರತ ದೇಶ ವಿಭಜನೆಯಾಗಿದ್ದೇ ಜಾತಿ ಮೇಲೆ. ಮುಸ್ಲಿಮರಿಗೆ ಪಾಕಿಸ್ತಾನ, ಹಿಂದುಗಳಿಗೆ ಹಿಂದೂಸ್ಥಾನ ಎಂದು ಹಿಂದೆಯೇ ಆಗಿತ್ತು. ಈ ದೇಶದ ಹಿಂದುಗಳು ಎಲ್ಲರನ್ನೂ ಸಮಾನ, ಸಹೋದರರಾಗಿ ಕಾಣುವ ಮನಃಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಈ ದೇಶದಲ್ಲಿರುವ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಹೋಗಿಎಂದು ಹೇಳಿಲ್ಲ. ಆದರೆ ಪಾಕಿಸ್ತಾನ ಅಲ್ಲಿರುವ ಎಲ್ಲಾ ಹಿಂದುಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಬರ್ಬರವಾಗಿ ಹತ್ಯೆ ಮಾಡಿತ್ತು ಎಂದರು.
ದೇಶದಲ್ಲಿ ಮುಸಲ್ಮಾನರ ಇತ್ತೀಚಿನ ದಿನಗಳ ನಡವಳಿಕೆ ಬಗ್ಗೆ ನಾವು ಇಂದು ಪ್ರಶ್ನೆ ಮಾಡುವಂತಾಗಿದೆ. ಹುಬ್ಬಳ್ಳಿಯ ನೇಹಾ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಘಟನೆ ಬಗ್ಗೆ ಖಂಡಿಸದೇ ನೇಹಾಗೆ ಯಾಜ್ ಜತೆ ಸಂಬಂಧವಿತ್ತು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಇದನ್ನು ವೈಯುಕ್ತಿಕ ಘಟನೆ ಎನ್ನುತ್ತಾರೆ. ಯಾವ ಕಾರಣಕ್ಕೆ ನಡೆದಿದೆ ಎಂಬುದನ್ನು ಬಹಿರಂಗಗೊಳಿಸಲಿ ಎಂದರು.
ಕಾಂಗ್ರೆಸ್ ಇಂತಹ ಕೃತ್ಯಗಳಿಗೆ ಬೆಂಬಲ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯಸರ್ಕಾರದ ತನಿಖೆ ಬಗ್ಗೆ ನಮಗೆ ನಂಬಿಕೆಯಿಲ್ಲ. ಘಟನೆ ಬಗ್ಗೆ ಈಗಾಗಲೇ ಚಾರ್ಜ್ಶೀಟ್ ಆಗಿದ್ದು, ಇದು ವೈಯುಕ್ತಿಕ ಘಟನೆ ಎಂದು ಹೇಳಿದ್ದಾರೆ. ಇದರಿಂದ ನೇಹಾ ಪ್ರಕರಣದಲ್ಲಿ ಆಕೆ ಕುಟುಂಬಕ್ಕೆ ನ್ಯಾಯ ದೊರೆಯುವ ವಿಶ್ವಾಸವಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಕೆ.ಕೆ.ವೆಂಕಟೇಶ್, ಮಾಗಲು ಪ್ರೇಮೇಶ್, ಮಂಜು ಹೊಳೆಬಾಗಿಲು, ಟಿ.ಎಂ.ಗುರುಮೂರ್ತಿ, ಕೆ.ಕೆ.ವೆಂಕಟೇಶ, ಯೋಗಾನಂದ, ಜೆಡಿಎಸ್ ಮುಖಂಡರಾದ ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ, ಎಂ.ಆರ್.ಜಗದೀಶ್ ಮತ್ತಿತರರು ಇದ್ದರು.