ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಹೋಂ ಕ್ವಾರೆಂಟೈನ್ನಲ್ಲಿದ್ದ ಸಬ್ ಕಲೆಕ್ಟರ್ ಪರಾರಿಯಾಗಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2016ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅನುಪಮ್ ಮಿಶ್ರಾ ಹೀಗೆ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ.
ಎಲ್ಲೆಲ್ಲೂ ಕರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ವಾಪಸ್ ಬಂದವರನ್ನು, ಅವರ ಸಂಪರ್ಕಕ್ಕೆ ಹೋದವರನ್ನೆಲ್ಲ ಹೋಂ ಕ್ವಾರೆಂಟೈನ್ನಲ್ಲಿ (ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರಬೇಕು) ಇಡಲಾಗಿದೆ. ಈ ಸಮಯದಲ್ಲಿ ಅವರು ಹೊರಗೆಲ್ಲೂ ಹೋಗಬಾರದು. ಸಾರ್ವಜನಿಕರ ಸಂಪರ್ಕಕ್ಕೆ ಬರಬಾರದು. ಈ ನಿಯಮ ಮೀರಿದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.
ಆದರೆ ಕೆಲವು ವಿಐಪಿಗಳೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಜವಾಬ್ದಾರಿಯಿಂದ ಇರಬೇಕಾದ ಸಬ್ ಕಲೆಕ್ಟರ್ ಹೀಗೆ ವರ್ತನೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಕೊಲ್ಲಂನ ಸಬ್ ಕಲೆಕ್ಟರ್ ಆಗಿರುವ ಅನುಪಮ್ ಮಿಶ್ರಾ ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಕೆಲವು ದಿನಗಳ ಹಿಂದೆ ರಜೆ ಕಳೆಯಲು ಸಿಂಗಾಪುರಕ್ಕೆ ಹೋಗಿದ್ದರು. ಅಲ್ಲಿಂದ ಕಾನ್ಪುರಕ್ಕೆ ಬಂದು, ಅಲ್ಲಿಂದ ಕರ್ತವ್ಯಕ್ಕೆ ಕೊಲ್ಲಂಗೆ ಆಗಮಿಸಿದ್ದರು. ವಿದೇಶ ಪ್ರಯಾಣದ ಹಿಸ್ಟರಿ ಇರುವುದರಿಂದ ಅವರನ್ನು ಕೊಲ್ಲಂನಲ್ಲೇ ಹೋಂ ಕ್ವಾರೆಂಟೈನ್ನಲ್ಲಿ ಇಡಲಾಗಿತ್ತು. ಮಾ.19ರಿಂದ 14 ದಿನಗಳ ಕಾಲ ಅವರು ಮನೆಯಲ್ಲಿ ಕರೊನಾ ನಿಗಾವಣೆಯಲ್ಲಿ ಇರಬೇಕಿತ್ತು. ಆದರೆ ಅವರು ಕೇರಳ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಏಕಾಏಕಿ ಕಾನ್ಪುರದ ತಮ್ಮ ಮನೆಗೆ ಓಡಿಹೋಗಿದ್ದಾರೆ.
ಐಎಎಸ್ ಅಧಿಕಾರಿ ನಾವು ಕರೆ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಅವರ ಸಿಮ್ ಟ್ರೇಸ್ ಮಾಡಿದಾಗ ಕಾನ್ಪುರದಲ್ಲಿ ಇದ್ದಿದ್ದು ತಿಳಿದು ಬಂದಿದೆ. ಹಾಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಲಂನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೇರಳದಲ್ಲಿ ಹೋಂ ಕ್ವಾರೆಂಟೈನ್ ಮೀರಿದ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಲಾಕ್ಡೌನ್ ಲಕ್ಷ್ಮಣ ರೇಖೆಯನ್ನು ದಾಟುವಿರಾ?- ಕಾನೂನು ಸಂಕಷ್ಟದ ಸುಳಿಗೆ ಬೀಳುವುದು ಖಚಿತ