ಕಲಬುರಗಿ: ಲಾಕ್ಡೌನ್ ನಿಷೇಧಾಜ್ಞೆ ಇದ್ದರೂ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಜಾತ್ರೆ ನಡೆದಿದೆ.
ಕರೊನಾ ವೈರಸ್ ಪ್ರಸರಣ ಹೆಚ್ಚುತ್ತಿದೆ. ಕಲಬುರಗಿಯಲ್ಲಿ ಇಂದೂ ಕೂಡ ಒಂದು ಕರೊನಾ ಪ್ರಕರಣ ಪತ್ತೆಯಾಗಿದೆ. ಸರ್ಕಾರ ಈಗಾಗಲೇ ಸಾರ್ವಜನಿಕ ಸಭೆ, ಸಮಾರಂಭಗಳನ್ನು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಿರ್ಬಂಧ ವಿಧಿಸಿದೆ. ಹೀಗಿದ್ದಾಗ್ಯೂ ಸಿದ್ದಲಿಂಗೇಶ್ವರ ಜಾತ್ರೆ, ರಥೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗಿದೆ.
ಜಾತ್ರೆಯ ರಥೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ರಥ ಎಳೆದಿದ್ದಾರೆ.
ಅಷ್ಟೇ ಅಲ್ಲ, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಯಾರು ನಮ್ಮ ಮೇಲೆ ಕೇಸ್ ಹಾಕುತ್ತಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಜಾತ್ರೆಯಲ್ಲಿ ಉದ್ಧಟತನ ತೋರಿದ್ದಾರೆ.
ರಾವೂರಿನಿಂದ ಮೂರು ಕಿ.ಮೀ.ದೂರದಲ್ಲಿರುವ ವಾಡಿ ಪಟ್ಟಣದಲ್ಲಿ ಮಗುವೊಂದರಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದ್ದರಿಂದ ಇಡೀ ಏರಿಯಾ ಸೀಲ್ ಡೌನ್ ಆಗಿದೆ. ಆದರೆ ರಾವೂರ ಗ್ರಾಮದಲ್ಲಿ ಜಾತ್ರೆ ನಡೆದಿದ್ದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವಾ? ಗೊತ್ತಿದ್ದೂ ಸುಮ್ಮನಿದೆಯಾ ಎಂಬುದೇ ಪ್ರಶ್ನೆಯಾಗಿದೆ.