ಬೆಂಗಳೂರು: ಕರೋನಾ ವೈರಸ್ Covid19 ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಶನಿವಾರದಿಂದ ಒಂದು ವಾರ ಕಾಲ ಸಭೆ,ಸಮಾರಂಭ ಸೇರಿ ಯಾವುದೇ ಜನದಟ್ಟಣೆಯ ಚಟುವಟಿಕೆ ಮಾಡದಂತೆ ನಿರ್ಬಂಧ ಹೇರಿದೆ. ಈ ವಿಚಾರದಲ್ಲಿ ಜನರ ಸಹಕಾರವನ್ನೂ ಕೋರಿರುವ ಸರ್ಕಾರ, ಕೆಲವು ಸರಳ ಮುಂಜಾಗ್ರತಾ ಕ್ರಮಗಳನ್ನೂ ಪ್ರಕಟಿಸಿದೆ. ಇದರ ಬಗ್ಗೆ ಅರಿವು ಮೂಡಿಸುವುದಕ್ಕೆ ವಿಡಿಯೋ, ಕರಪತ್ರಗಳನ್ನೂ ಪ್ರಕಟ ಮಾಡಿ ಪ್ರಸಾರ ಮಾಡಿದೆ.
ಇದರಂತೆ ಕೆಲವು ಮುಂಜಾಗ್ರತಾ ಕ್ರಮಗಳು ಇಂತಿವೆ- ಒಂದೊಮ್ಮೆ ನೀವು ಜ್ವರ ಮತ್ತು ಕೆಮ್ಮುಗಳಿಂದ ಬಳಲುತ್ತಿದ್ದರೆ ಯಾವುದೇ ರೀತಿಯ ಪ್ರಯಾಣವನ್ನು ಮಾಡಬೇಡಿ. ಪದೇಪದೇ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯುತ್ತಿರಿ. ನಿಮ್ಮ ಇತ್ತೀಚಿನ ಪ್ರಯಾಣದ ಮಾಹಿತಿಯನ್ನು ಸರ್ಕಾರದ ಆರೋಗ್ಯ ಸೇವಾ ಸಿಬ್ಬಂದಿ ಜತೆಗೆ ಹಂಚಿಕೊಳ್ಳಿ. ಒಂದೊಮ್ಮೆ ನಿಮಗೆ ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆಯನ್ನು ಕಡ್ಡಾಯ ಪಡೆದುಕೊಳ್ಳಬೇಕು.
ಈ ಬಗ್ಗೆ ಗಮನವಿರಲಿ: ಒಂದೊಮ್ಮೆ ನೀವು Covid19 ಸೋಂಕು ಪೀಡಿತ ರಾಷ್ಟ್ರಗಳಿಗೆ ಫೆಬ್ರವರಿ 15ರಿಂದ ಈಚೆಗೆ ಪ್ರವಾಸ ಹೋಗಿದ್ದೀರಾದರೆ, ಕೂಡಲೇ ಕರೋನಾ ವೈರಸ್ (2019-nCov) ಟೆಸ್ಟ್ಗೆ ಒಳಗಾಗುವುದು ಅಗತ್ಯ. ಟೆಸ್ಟಿಂಗ್ ಸೆಂಟರ್ಗಳ ಬಗ್ಗೆ ತಿಳಿದುಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು.
ಇದೇ ರೀತಿ ಒಂದೊಮ್ಮೆ ನೀವು ಕಳೆದ 15 ದಿನಗಳ ಅವಧಿಯಲ್ಲಿ ಕರೋನಾ ಸೋಂಕು ಪೀಡಿತ ರಾಷ್ಟ್ರಗಳಿಗೆ ಹೋಗಿ ವಾಪಸಾಗಿದ್ದರೆ, ಮನೆಯ ಸದಸ್ಯರೂ ಸೇರಿ ಇತರರ ಜತೆಗೆ ನಿಮ್ಮ ಸಂಪರ್ಕ ಕಡಿಮೆ ಇರಲಿ. ಪ್ರತ್ಯೇಕವಾಗಿ ಒಂದು ಕೊಠಡಿಯಲ್ಲೇ ವಾಸವಿರಿ.
ಕಳೆದ 28 ದಿನಗಳ ಅವಧಿಯಲ್ಲಿ ನೀವು Covid19 ಸೋಂಕುಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿ ವಾಪಸಾಗಿದ್ದು, ಒಂದೊಮ್ಮೆ ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿದ್ದರೆ ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 104ಕ್ಕೆ ಅಥವಾ 08022208541ಕ್ಕೆ ಕರೆ ಮಾಡಿ.
ನೋವೆಲ್ ಕರೋನಾ ವೈರಸ್ ಸೋಂಕು ತಡೆಗೆ ಏಳು ಅಂಶಗಳ ಸರಳ ಸೂತ್ರವಿದೆ. ಅದರ ವಿಡಿಯೋ ಕೆಳಗಿರುವ ವಿಜಯವಾಣಿ ಇನ್ಸ್ಟಾಗ್ರಾಂ ಲಿಂಕ್ನಲ್ಲಿದೆ..ಗಮನಿಸಿ…