ಪುಣೆ : ನಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಪುಣೆ ನಗರ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪ್ರಶಾಂತ್ ಜಗತಾಪ್ ಅವರನ್ನು ಕೋವಿಡ್ ನಿಯಮಗಳ ಉಲ್ಲಂಘನೆಗಾಗಿ ಇಂದು ಬಂಧಿಸಲಾಯಿತು. ಪಕ್ಷದ ಹೊಸ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿದ ಆರೋಪ ಎದುರಿಸುತ್ತಿರುವ ಆರು ಜನ ಎನ್ಸಿಪಿ ಪದಾಧಿಕಾರಿಗಳಲ್ಲಿ ಜಗತಾಪ್ ಕೂಡ ಒಬ್ಬರು.
ಮಹಾರಾಷ್ಟ್ರದ ಪುಣೆಯ ಶಿವಾಜಿನಗರದಲ್ಲಿ ಜೂನ್ 19 ರ ಸಂಜೆ ನಡೆದ ಪಕ್ಷದ ಹೊಸ ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ 100 ರಿಂದ 150 ಜನರ ಹಾಜರಾತಿಗೆ ಅನುಮತಿ ಪಡೆಯಲಾಗಿತ್ತು. ಆದರೆ, ರಾಜ್ಯದ ಡೆಪ್ಯುಟಿ ಸಿಎಂ ಅಜಿತ್ ಪವಾರ್ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ 400 ರಿಂದ 500 ಜನರನ್ನು ಸೇರಿಸಿದ್ದರು. ಕೆಲವರು ಮಾಸ್ಕ್ ತೊಡದೆ ಭಾಗವಹಿಸಿದರೆ, ಸಾಮಾಜಿಕ ಅಂತರ ಪಾಲಿಸಲಿಲ್ಲ ಎಂದು ಶಿವಾಜಿನಗರ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮೂರನೇ ಅಲೆಗೆ ಸಿದ್ಧತೆ: ಬೆಂಗಳೂರಲ್ಲಿ ಮಕ್ಕಳಿಗಾಗಿ 1,419 ಬೆಡ್ ಮೀಸಲು
ಪ್ರಶಾಂತ್ ಜಗತಾಪ್ರೊಂದಿಗೆ ಎನ್ಸಿಪಿ ಯುವ ನಾಯಕ ಮಹೇಶ್ ಹಂಡೆ, ಪದಾಧಿಕಾರಿಗಳಾದ ಪ್ರದೀಪ್ ದೇಶ್ಮುಖ್, ನೀಲೇಶ್ ನಿಕಂ, ರೋಹನ್ ಪಾಯ್ಗುಡೆ ಮತ್ತು ಬಾಲಾಸಾಹೇಬ್ ಬೊಡಕೆ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ನಾಯಕರನ್ನು ಬಂಧಿಸಿ, ಸ್ವಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)