ರಾಯಚೂರು: ಕರೊನಾ ಸೋಂಕು ಹರಡುವ ಭೀತಿಯಿಂದ ಜಿಲ್ಲಾಡಳಿತ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದ್ದು, ವಿದೇಶಕ್ಕೆ ಹೋಗಿ ಬಂದವರ ಮೇಲೆ ನಿಗಾ ವಹಿಸಲಾಗಿದೆ.
ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವುದರ ಜತೆಗೆ ಶಾಪಿಂಗ್ ಮಾಲ್ ಮತ್ತು ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಕರಪತ್ರ ಹಂಚುವ ಮೂಲಕ ಜನರು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತಿದೆ.
ನಗರದ ಬಸವೇಶ್ವರ ವೃತ್ತದಲ್ಲಿ ಹತ್ತಿರದಲ್ಲಿನ ತೆರೆದಿದ್ದ ರಿಲಾಯನ್ಸ್ ಮಾರ್ಕೆಟ್ನ್ನು ಅಧಿಕಾರಿಗಳು ಮುಚ್ಚಿಸಿದರು. ಚಂದ್ರಮೌಳೇಶ್ವರ ವೃತ್ತದಲ್ಲಿನ ವಿಶಾಲ್ ಮಾರ್ಟ್ ಹಾಗೂ ಬಸವನಬಾವಿ ವೃತ್ತದಲ್ಲಿನ ರಿಲಾಯನ್ಸ್ ಸ್ಮಾರ್ಟ್ ತೆಗೆಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಬಂದ್ ಮಾಡಲಾಗಿದೆ.
ಕರೊನಾ ಎಫೆಕ್ಟ್ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದಾಯದ ಮೇಲೂ ಪರಿಣಾಮ ಬೀರಿದೆ. ಹೈದರಾಬಾದ್ ಮತ್ತು ಬೆಂಗಳೂರು ಮುಂತಾದ ದೂರದ ಮಾರ್ಗದಲ್ಲಿ ಓಡಾಡುವ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯವಾಗಿ ಓಡಾಡುವ ಬಸ್ಗಳ ಮೇಲೆ ಅಷ್ಟೊಂದು ಪರಿಣಾಮ ಬೀರಿಲ್ಲ.
ಜಿಲ್ಲೆಯಲ್ಲಿ 7 ಡಿಪೋಗಳಿಂದ 24 ದೂರದ ಮಾರ್ಗದಲ್ಲಿ ಸಂಚರಿಸುವ ಬಸ್ಗಳಿವೆ. ಪ್ರಯಾಣಿಕರ ಕೊರತೆಯಿಂದ ಪ್ರತಿನಿತ್ಯ ಐದಾರು ಬಸ್ಗಳ ಸಂಚಾರ ರದ್ದುಗೊಳಿಸಲಾಗುತ್ತಿದೆ. ಅದರಲ್ಲೂ ಹೈದರಾಬಾದ್, ಬೆಂಗಳೂರು ಮಾರ್ಗದ ಬಸ್ಗಳ ಓಡಾಟದಿಂದ ರಾಯಚೂರು ವಿಭಾಗಕ್ಕೆ 1.50 ಲಕ್ಷ ರೂ.ನಷ್ಟು ನಷ್ಟವುಂಟಾಗುತ್ತಿದೆ.