ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲುಶಿಕ್ಷೆಗೆ ಒಂದಲ್ಲ ಒಂದು ತಡೆ ಎದುರಾಗುತ್ತಿದೆ. ಅಪರಾಧಿಗಳು ಹಲವು ರೀತಿಯ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಜ.29ರಂದು ಅರ್ಜಿ ಸಲ್ಲಿಸಿದ್ದ ಅಪರಾಧಿ ವಿನಯ್ ಶರ್ಮಾ ಇಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಪ್ರಪತಿಯವರು ತಿರಸ್ಕಾರ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಿನಯ್ ಶರ್ಮಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಫೆ.1ರಂದು ತಿರಸ್ಕರಿಸಿದ್ದರು.
ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿದ್ದರೂ ಹಲವು ಕಾನೂನು ಪ್ರಕ್ರಿಯೆಗಳಿಂದ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಒಮ್ಮೆ ಡೆತ್ ವಾರಂಟ್ ಜಾರಿಯಾಗಿತ್ತು. ಆದರೆ ಒಬ್ಬೊಬ್ಬರೇ ಕ್ಷಮಾದಾನ ಅರ್ಜಿ ಸಲ್ಲಿಸುತ್ತಿದ್ದಾರೆ. ಏನೇ ಆದೇಶ ಬಂದರೂ ಅದಕ್ಕೊಂದು ಮೇಲ್ಮನವಿ ಅರ್ಜಿ ಹಿಡಿದು ನ್ಯಾಯಾಲಯಗಳಿಗೆ ಎಡತಾಕುತ್ತಿದ್ದಾರೆ.
ಅಪರಾಧಿಗಳಿಗೆ ಬ್ಲ್ಯಾಕ್ ವಾರಂಟ್ ಜಾರಿಗೊಳಿಸಲು ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಸುಪ್ರೀಂಕೋರ್ಟ್ಗೆ ಮನವಿ ಮಾಡಿವೆ. (ಪಿಟಿಐ)