ಹಗರಿಬೊಮ್ಮನಹಳ್ಳಿ: ಸಂವಿಧಾನಿಕ ಮೌಲ್ಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದಾಗಿ ಆರೋಪಿಸಿ ಸಂವಿಧಾನ ಸುರಕ್ಷಾ ಸಮಿತಿ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿಯ ಮುಂದೆ ಗುರುವಾರ ಉಪವಾಸ ನಿರಶನ ನಡೆಸಿದರು.
ಸಮಿತಿಯ ಸಂಚಾಲಕ ಸೈಯದ್ ಇರ್ಫಾನ್ ಮಾತನಾಡಿ, ಅಂದು ಮಹಾತ್ಮ ಗಾಂಧಿ, ಬ್ರಿಟಿಷರ್ ದಬ್ಬಾಳಿಕೆ ವಿರುದ್ಧ್ದ ಮಾ.12 ರಂದು ದಂಡಿಯಾತ್ರೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂವಿಧಾನಿಕ ಮೌಲ್ಯಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸಿ ಸಂವಿಧಾನ ಸುರಕ್ಷಾ ಸಮಿತಿ ಹಾಗೂ ನಾವು ಭಾರತೀಯರು ಜಂಟಿ ಕ್ರಿಯಾ ಸಮಿತಿ, ಸಂವಿಧಾನ ಉಳಿಸಿ ವೇದಿಕೆಗಳು ಉಪವಾಸ ನಿರಶನ ಹಮ್ಮಿಕೊಳ್ಳಲಾಗಿದೆ. ಮೂರು ತಿಂಗಳಿನಿಂದ ದೇಶದ ಪ್ರತಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ರಾಜ್ಯದಲ್ಲಿ ಏ.15ರಿಂದ ಜನಗಣತಿ ಆರಂಭವಾಗಲಿದೆ. ಮನೆಗಣತಿಗೆ ನಮ್ಮ ವಿರೋಧವಿಲ್ಲ ಆದರೆ, ಜತೆಗೆ ಎನ್ಪಿಆರ್ ಮಾಹಿತಿ ಸಂಗ್ರಹಿಸುವ ಷಡ್ಯಂತ್ರ ಮಾಡಲಾಗಿದೆ ಇದನ್ನು ಕೈಬಿಡಬೇಕೆಂದು ಸಮಿತಿ ಆಗ್ರಹಿಸುತ್ತದೆ ಎಂದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ, ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಮಾಳಮ್ಮ, ತಾಪಂ ಹಂಗಾಮಿ ಉಪಾಧ್ಯಕ್ಷ ಬುಡ್ಡಿ ಬಸವರಾಜ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ತೆಲಗಿ ಇಸ್ಮಾಯಿಲ್, ಕನ್ನಿಹಳ್ಳಿ ಚಂದ್ರಶೇಖರ್, ಕೆ.ಪಿ.ದೇವರಾಜ, ಪತ್ರೇಶ್ ಹಿರೇಮಠ್, ಹೊಸಪೇಟೆ ಖುರ್ಷಿದ್, ಎ.ಹಮೀದ್, ಬಿ.ನಜೀರ್, ಮೆಕಾನಿಕ್ ಇಸ್ಮಾಯಿಲ್, ಖಲೀಫ್, ಜೆ.ಎಂ.ರುದ್ರಮುನಿಸ್ವಾಮಿ, ಇಕ್ಬಾಲ್, ಕೆ.ನಾಗಪ್ಪ, ಎಂ.ರಾಜಸಾಬ್ ಇತರರಿದ್ದರು.