ಕೋಲಾರ: ರಾಮ ಪ್ಲೇಕ್ಸ್, ಹಿಂದು ಧ್ವಜವನ್ನು ತೆರವುಗೊಳಿಸಿ ತಿಪ್ಪೆಗೆ ಎಸೆದು ಅವಮಾನ ಮಾಡಿರುವ ಅಧಿಕಾರಿ, ಸಿಬ್ಬಂದಿಯನ್ನು 2 ದಿನದಲ್ಲಿ ಸೇವೆಯಿಂದ ಅಮಾನತುಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ್ಲೆಕ್ಸ್, ಧ್ವಜದಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಭಾವಚಿತ್ರ ಇರಲಿಲ್ಲ, ಹಾಗಾದರೆ ಮಸೀದಿಗಳ ಮೇಲೆ ಹಾರಾಡುತ್ತಿರುವ ಅನ್ಯ ದೇಶದ ಧ್ವಜಗಳನ್ನು ಸಹ ತೆರವುಗೊಳಿಸಿ ಎಂದು ಸವಾಲು ಹಾಕಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಿಗುವಚಿಂತಪ್ಪಲ್ಲಿ ರಾಮನ ದೇವಾಲಯದ ಮೇಲೆ ಧ್ವಜ, ಪ್ಲೇಕ್ಸ್ನ್ನು ಅಡ್ಡಗಲ್ ಗ್ರಾ.ಪಂ ಪಿಡಿಒ ಎಜಾಜ್ಪಾಷಾ ಹಾಗೂ ಸಿಬ್ಬಂದಿ ಖಲೀಲ್, ಖಾದರ್ಖಾನ್, ರಷೀದ್, ಖಲೀಲ್ ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ, ಜಿ.ಪಂ. ಸಿಇಒ ಅವರಿಗೆ ದೂರು ನೀಡಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಾಜಲದಿನ್ನೆ ಗ್ರಾಮದಲ್ಲಿನ ಸರ್ಕಾರಿ ಜಾಗವನ್ನು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ನೀಡಲಾಗಿದೆ. ಉಳಿಕೆ ಮೈದಾನಕ್ಕೆ ಮೀಸಲಿರಿಸಿದ್ದ ಜಾಗವನ್ನು ವಕ್ಫ್ ಬೋರ್ಡ್ಗೆ ನೀಡಿರುವುದಕ್ಕೆ ವಿರೋಧವಿದೆ. ಸಂಸದನಾಗಿ ಗಡಿ ದಾಟಬಾರದು ಎಂಬ ಉದ್ದೇಶದಿಂದ ಸುಮ್ಮನಿದ್ದೇನೆ, ಡಿಸಿ ಎಂದರೆ ಎಲ್ಲ ಸಮುದಾಯಕ್ಕೂ ಅಧಿಕಾರಿ. ಹಾಗಾದರೆ ಎಲ್ಲ ಸಮುದಾಯಕ್ಕೂ ಜಾಗ ನೀಡಿ ಎಂದು ಆಗ್ರಹಿಸಿದರು.
ಅಕ್ರಂಪಾಷಾ ಅವರು ಜಿಲ್ಲೆಯಲ್ಲೆ ಮುಂದುವರೆದರೆ ಕಾನೂನು ಪ್ರಕಾರ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ, ಚುನಾವಣಾ ಆಯೋಗಕ್ಕೆ ನಾವು ಸಹ ದೂರು ನೀಡಿದ್ದೆವೆ. ಹಿಂದೆ ಡಿ.ಕೆ.ರವಿ, ವಿಶ್ವನಾಥ್, ತ್ರಿಲೋಕಚಂದ್ರ, ಮಂಜುನಾಥ್, ಸೆಲ್ವಮಣಿ ಡಿಸಿಗಳಾಗಿ ಕೆಲಸ ಮಾಡಿ ಜನರ ಮನೆ ಮಾತಾಗಿದ್ದಾರೆ. ಜನ ಸೇವೆ ಮಾಡುವ ಜಿಲ್ಲಾಧಿಕಾರಿ ನಮಗೆ ಬೇಕು ಎಂದರು.
ಬಿಜೆಪಿಯ ಶಿಸ್ತಿನ ಸಿಪಾಯಿ
ನಾನು ಬಿಜೆಪಿಯ ಶಿಸ್ತಿನ ಸಿಪಾಯಿ, ಟಿಕೆಟ್ ವಿಚಾರ ಹೈಕಮಾಂಡ್ ಅವರಿಗೆ ಬಿಟ್ಟಿದ್ದು, ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗುವುದು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು. ನನ್ನ ಕಾರ್ಯ ವೈಖರಿ, ಕ್ಷೇತ್ರದ ಸರ್ವೇಯನ್ನು ಎರಡ್ಮೂರು ಬಾರಿ ಪಕ್ಷದ ಹಿರಿಯರು ಮಾಡಿಸಿರುತ್ತಾರೆ, ಎನ್ಡಿಎ ಮೈತ್ರಿಕೂಟ ಪಾಲನೆ ಪ್ರಮಾಣಿಕವಾಗಿ ಕೆಲಸ ಮಾಡಬೇಕು. ದೇಶದ ಭಕ್ತರೆ ನನಗೆ ಮತ ಹಾಕಿ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕುಮಾರ ಸ್ವಾಮಿ, ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಪಕ್ಷದ ನಾಯಕರೆಲ್ಲ ಸೇರಿ ಏನು ತೀರ್ಮಾನ ತೆಗುದುಕೊಳ್ಳುತ್ತಾರೊ ಅದಕ್ಕೆ ನಾನು ಬದ್ಧ ಎಂದು ಸಂಸದರು ತಿಳಿಸಿದರು.