ಬೆಂಗಳೂರು: ಇದೀಗ ಕಾಂಗ್ರೆಸ್ ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಚುನಾವಣಾ ಕಣ ರಂಗೇರುವಂತೆ ಮಾಡಿದೆ. ಇನ್ನುಳಿದ ಕ್ಷೇತ್ರಗಳಿಗೆ ಯಾರು ಸ್ಪರ್ಧಿಸುತ್ತಾರೆ ಎನ್ನುವ ಮಾಹಿತಿಯನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ
ಸದ್ಯ ಬಂದಿರುವ ಪಟ್ಟಿಯಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವನ್ನು ಹೈಕಮಾಂಡ್ ನೀಡಿದೆ. ಮಗ ಯತೀಂದ್ರಗೆ ವರುಣಾ ನೀಡದೇ ಇದ್ದು ಸಿದ್ದರಾಮಯ್ಯಗೂ ಒಂದೇ ಕ್ಷೇತ್ರ ಹಂಚಿಕೆಯಾಗಿದೆ.
ಇನ್ನು ಪ್ರಮುಖ ಕ್ಷೇತ್ರಗಳಾದ ದೇವನಹಳ್ಳಿಗೆ ಕೆ ಎಚ್ ಮುನಿಯಪ್ಪ. ಟಿ ನರಸಿಪುರಕ್ಕೆ ಹೆಚ್ ಸಿ ಮಹದೇವಪ್ಪ, ಪಾವಗಡಕ್ಕೆ ವೆಂಕಟರಮಣಪ್ಪ ಬದಲು ಅವರ ಮಗ ವೆಂಕಟೇಶ್, ಚಾಮರಾಜಪೇಟೆಗೆ ಜಮೀರ್ ಅಹ್ಮದ್ ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ನ ಅತಿ ಹಿರಿಯ ನಾಯಕ 92 ವರ್ಷದ ಶಾಮನೂರಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಘೋಷಣೆಯಾಗದ ಪುಲಕೇಶಿನಗರದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನ ಅಖಂಡ ಶ್ರೀನಿವಾಸ್ ಮೂರ್ತಿ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಗೊಂದಲದ ಕಾರಣ ನಾಯಕರು ತಡೆ ಹಿಡಿದಿದ್ದಾರೆ. ಇನ್ನು ಪಾವಗಡ ವೆಂಕಟರಮಣಪ್ಪ ಬದಲಿಗೆ ಪುತ್ರ ಹೆಚ್.ವಿ. ವೆಂಕಟೇಶ್ ಗೆ ಟಿಕೆಟ್ ನೀಡಲಾಗಿದೆ.ಆದರೆ ಮಾಜಿ ಸಂಸದ ಚಂದ್ರಪ್ಪ ಪಾವಗಡದ ಟಿಕೆಟ್ ಕೇಳಿದ್ದರು. ಮಾಜಿ ಸಂಸದರಿಗೆ ಲಭಿಸದ್ದು ಹೆಚ್.ವಿ. ವೆಂಕಟೇಶ್ ಗೆ ಸಿಕ್ಕಿದೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಯುವಕ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಲಾಗಿದೆ. ರಕ್ಷಿತ್ ಗೆ ಟಿಕೆಟ್ ನೀಡುವುದನ್ನು ಮಾಜಿ ಶಾಸಕರಾದ ವಸಂತ ಬಂಗೇರ ಮತ್ತು ಗಂಗಾಧರ ಗೌಡರು ವಿರೋಧಿಸಿದ್ದರು. ಆದರೆ ರಕ್ಷಿತ್ ಶಿವರಾಂ ಬೆನ್ನಿಗೆ ನಿಂತಿದ್ದ ಬಿಕೆ ಹರಿಪ್ರಸಾದ್ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ ನಾಗೇಶ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬಸವನಗುಡಿಯಿಂದ ಹಾಲಿ ಎಂಎಲ್ ಸಿ ಯುಬಿ ವೆಂಕಟೇಶ್ ಗೆ ಟಿಕೆಟ್ ನೀಡಲಾಗಿದೆ. ಇವರು ಮಲ್ಲಿಕಾರ್ಜುನ ಖರ್ಗೆಗೆ ಪರಮಾಪ್ತ ಆಗಿದ್ದಾರೆ.
ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲ ಇದ್ದರೂ ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಮಾಡಲಾಗಿದೆ. ಪ್ರಮುಖ ನಾಯಕನ ಕ್ಷೇತ್ರದ ಹೆಸರು ಮೊದಲ ಪಟ್ಟಿಯಲ್ಲಿ ಇರದಿದ್ದರೆ ಒಳ್ಳೆ ಸಂದೇಶ ರವಾನೆಯಾಗುವುದಿಲ್ಲ ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಕ್ಷೇತ್ರ ಆಯ್ಕೆ ಬಗ್ಗೆ ನಿರ್ಧಾರ ಹೇಳಲು ನಿನ್ನೆವರೆಗೆ ಗಡುವು ಹೈಕಮಾಂಡ್ ನೀಡಿತ್ತು.