ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಪ್ರಧಾನಿ ಮೋದಿ ಅವರನ್ನು ಪಲಾಯನಗೈದ ಆರ್ಥಿಕ ಅಪರಾಧಿ ನೀರವ್ ಮೋದಿ ಹಾಗೂ ಧೃತರಾಷ್ಟ್ರರಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಅನೇಕ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆಯಲ್ಲಿ ಕೆಲ ಕಾಲ ಗದ್ದಲ ಏರ್ಪಟ್ಟಿತು.
ಧೃತರಾಷ್ಟ್ರ ಇದ್ದಾಗಲೇ ದ್ರೌಪದಿಯ ಬಟ್ಟೆಗಳನ್ನು ಅಪಹರಿಸಲಾಯಿತು. ಇಂದಿಗೂ ರಾಜರು ಕುರುಡರಾಗಿ ಕುಳಿತಿದ್ದಾರೆ. ಇಲ್ಲಿ ಮಣಿಪುರ ಮತ್ತು ಹಸ್ತಿನಾಪುರ ಎಂಬ ವ್ಯತ್ಯಾಸವಿಲ್ಲ ಎನ್ನುವ ಮೂಲಕ ಮಣಿಪುರದ ಬೆತ್ತಲೆ ಮೆರವಣಿಗೆ ಘಟನೆಯನ್ನು ಮಹಾಭಾರತಕ್ಕೆ ತಳುಕು ಹಾಕಿ ಪ್ರಧಾನಿ ಮೋದಿಯನ್ನು ಚೌಧರಿ ಕುಟುಕಿದರು.
ಪ್ರಧಾನಿ ಮೋದಿ ಅವರು 100 ಬಾರಿ ಪ್ರಧಾನಿಯಾದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಪಕ್ಷವಾಗಿ ನಾವು ಜನರ ಕಲ್ಯಾಣದ ಕಡೆ ಗಮನ ಹರಿಸುತ್ತೇವೆ. ಅವಿಶ್ವಾಸ ನಿರ್ಣಯದ ಅಧಿಕಾರವು ಇಂದು ಸಂಸತ್ತಿಗೆ ಪ್ರಧಾನಿಯನ್ನು ಕರೆತಂದಿದೆ. ಈ ಅವಿಶ್ವಾಸ ನಿರ್ಣಯದ ಬಗ್ಗೆ ನಾವೇನೂ ಯೋಚಿಸಿರಲಿಲ್ಲ. ಪ್ರಧಾನಿ ಮೋದಿಯವರು ಸಂಸತ್ತಿಗೆ ಬಂದು ಮಣಿಪುರ ವಿಷಯದ ಬಗ್ಗೆ ಮಾತನಾಡಬೇಕು ಎಂದು ಮಾತ್ರ ನಾವು ಒತ್ತಾಯಿಸುತ್ತಿದ್ದೆವು. ನಾವು ಯಾವುದೇ ಬಿಜೆಪಿ ಸದಸ್ಯರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತಿರಲಿಲ್ಲ, ನಮ್ಮ ಪ್ರಧಾನಿಗೆ ಬರುವಂತೆ ನಾವು ಒತ್ತಾಯಿಸುತ್ತಿದ್ದೆವು ಎಂದರು.
ತನ್ನ ಹೇಳಿಕೆಯನ್ನು ಹಿಂಪಡೆದು ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೋರಬೇಕೆಂದು ಬಿಜೆಪಿ ಸಂಸದರು ಚೌಧರಿ ಅವರನ್ನು ಒತ್ತಾಯಿಸಿದರು. ಪ್ರಧಾನ ಮಂತ್ರಿ ಸ್ಥಾನ ಉನ್ನತ ಅಧಿಕಾರವಾಗಿದೆ. ಚೌಧರಿ ಅವರ ಹೇಳಿಕೆಯನ್ನು ಕಡತದಿಂದ ತೆರವುಗೊಳಿಸಬೇಕು ಮತ್ತು ಅವರು ಕ್ಷಮೆಯಾಚಿಸಬೇಕು. ಪ್ರಧಾನಿ ವಿರುದ್ಧ ನಿರಾಧಾರ ಆರೋಪಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ಕೂಡಲೇ ಕ್ಷಮೆಯಾಚಿಸಲೇಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಟ್ಟು ಹಿಡಿದರು.
ಇದೇ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ವಿರುದ್ಧದ ಧೃತರಾಷ್ಟ್ರ ಹಾಗೂ ನೀರವ್ ಮೋದಿ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದರು. (ಏಜೆನ್ಸೀಸ್)
ನಡುರಸ್ತೆಯಲ್ಲೇ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಬಾರಿಸಿದ ಯುವತಿ: ಕಠಿಣ ಕ್ರಮಕ್ಕೆ ಆಗ್ರಹ
ಹೋಟೆಲ್ ರೂಂನಲ್ಲಿ ಹುಡುಗಿಯ ನಿಗೂಢ ಸಾವು: ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು